ADVERTISEMENT

ಚನ್ನರಾಯಪಟ್ಟಣ: ರೈತರಿಗೆ ಪರಿಹಾರ ಮೊತ್ತ ಹೆಚ್ಚಿಸಿ

ಸೌರವಿದ್ಯುತ್ ದೀಪ ಅಳವಡಿಕೆ: ಶಾಸಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಮೇ 2020, 13:01 IST
Last Updated 9 ಮೇ 2020, 13:01 IST
ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 2019-20 ನೇ ಸಾಲಿನ ವರ್ಗ-1ರ ಅನುದಾನದಲ್ಲಿ ಸೋಲಾರ್ ಲೈಟ್ ಅಳವಡಿಕೆಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು
ಚನ್ನರಾಯಪಟ್ಟಣ ಹೋಬಳಿಯ ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 2019-20 ನೇ ಸಾಲಿನ ವರ್ಗ-1ರ ಅನುದಾನದಲ್ಲಿ ಸೋಲಾರ್ ಲೈಟ್ ಅಳವಡಿಕೆಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು   

ಚನ್ನರಾಯಪಟ್ಟಣ: ‘ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿ ಮಾಡಿದ ಸರ್ಕಾರ, ರೈತಾಪಿ ವರ್ಗದ ಹಿತ ಕಾಯುವಲ್ಲಿ ವಿಫಲವಾಗಿದ್ದು, ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಹೋಬಳಿಯ ಗಂಗವಾರ-ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ 2019-20 ನೇ ಸಾಲಿನ ವರ್ಗ-1ರ ಅನುದಾನದಲ್ಲಿ ಸೌರವಿದ್ಯುತ್ ದೀಪಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಕಷ್ಟು ದ್ರಾಕ್ಷಿ ಬೆಳೆಗಾರರು, ಹೂ ತೋಟಗಳು, ಸೇರಿದಂತೆ ನೂರಾರು ಎಕರೆಯಲ್ಲಿ ಬೆಳೆದಿರುವ ಬೆಳೆಗಳು ನಷ್ಟವಾಗಿವೆ. ಮುಂದಿನ ಬೆಳೆಗೆ ಬಂಡವಾಳಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರಿಗೆ ಸೂಕ್ತವಾದ ಪರಿಹಾರ ವಿತರಣೆ ಮಾಡುವುದರ ಬದಲಿಗೆ ಬಿಡಿಗಾಸಿನ ಪರಿಹಾರವನ್ನು ನೀಡಲಿಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ಸೌರಶಕ್ತಿ ದೀಪ ಅಳವಡಿಸುವುದರಿಂದ ವಿದ್ಯುತ್ ಉಳಿತಾಯ ಮಾಡುವುದರ ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಹಣಕಾಸಿನ ಹೊರೆಯಾಗುವುದನ್ನು ತಪ್ಪಿಸಲಿಕ್ಕೆ ಅನುಕೂಲವಾಗಲಿದೆ’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇನಕ ಕೃಷ್ಣಮೂರ್ತಿ ಮಾತನಾಡಿ, ‘ನಮ್ಮ ಗ್ರಾಮ ಪಂಚಾಯಿತಿಯಲ್ಲಿ ವರ್ಗ-1ರ ಹಣವನ್ನು ಸೌರಶಕ್ತಿ ದೀಪಗಳಿಗೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಹಳ್ಳಿಗಳಲ್ಲೂ ಸೌರಶಕ್ತಿ ದೀಪವನ್ನು ಅಳವಡಿಸಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದ ನಮ್ಮ ಜನರಿಗೆ ಅನುಕೂಲವಾಗುತ್ತದೆ. ಇಷ್ಟೆ ಅಲ್ಲದೇ ಕುಡಿಯುವ ನೀರು ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯವಾಗಿರುವ ಮೂಲಸೌಕರ್ಯಗಳಿಗೂ ಹೆಚ್ಚು ಆದ್ಯತೆ ನೀಡಲಾಗುತ್ತಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾವೀರೇಗೌಡ, ಸದಸ್ಯ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ ರಾಮಚಂದ್ರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮುಖಂಡರಾದ ಜಯರಾಮೇಗೌಡ, ಸಿ.ಎಸ್.ರಾಜಣ್ಣ, ಸಂಪಗಪ್ಪ, ಎಂ.ರಾಜಣ್ಣ, ಪ್ರೇಮಾ ರಾಮಸ್ವಾಮಿ, ನಾರಾಯಣಮ್ಮ ಮಂಜುನಾಥ್, ಸುಜಾತನಾರಾಯಣಸ್ವಾಮಿ, ಎಂ.ನಾಗರಾಜ್, ಆರ್ ಮಂಜುನಾಥ್, ರಮೇಶ್, ಶಶಿಕಲಾಶಿವರಾಜ್, ಲಕ್ಷ್ಮಮ್ಮಪುಟ್ಟಪ್ಪ, ಎಂ.ರಾಜಣ್ಣ, ಮಂಜುಳಾ ನಾಗರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.