ADVERTISEMENT

ಸೊಣ್ಣೇನಹಳ್ಳಿ: ಮತ್ತೆ ಚಿರತೆ ದಾಳಿ, 16 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:15 IST
Last Updated 20 ಏಪ್ರಿಲ್ 2021, 3:15 IST
ಚಿರತೆ ದಾಳಿಯಿಂದ ಮೃತಪಟ್ಟಿರುವ ಕುರಿಗಳು
ಚಿರತೆ ದಾಳಿಯಿಂದ ಮೃತಪಟ್ಟಿರುವ ಕುರಿಗಳು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮಕ್ಕೆ ಮತ್ತೆ ಮತ್ತೆ ಚಿರತೆ ದಾಳಿ ಮಾಡಿದ್ದು ಕುರಿ, ಮೇಕೆಗಳನ್ನು ಕಚ್ಚಿ ಗಾಯಗೊಳಿಸಿದೆ.

ಮಾಕಳಿ ಬೆಟ್ಟದ ಸಮೀಪದಲ್ಲಿನ ಸೊಣ್ಣೇನಹಳ್ಳಿ ಗ್ರಾಮಸ್ಥರು ಚಿರತೆ ದಾಳಿಯಿಂದ ಕಂಗೆಟ್ಟು ಹೋಗಿದ್ದು ಆತಂಕದಲ್ಲಿ ದಿನಕಳೆಯುವಂತಹ ಪರಿಸ್ಥಿತಿ ಎದುರಾಗಿದೆ.

ಏ.5ರಂದು ಇದೇ ಗ್ರಾಮಕ್ಕೆ ಚಿರತೆ ನುಗ್ಗಿ ನಾಲ್ಕು ಕುರಿಗಳನ್ನು ಬಲಿ ಪಡೆದಿದ್ದ ಘಟನೆ ಮಾಸುವ ಮುನ್ನವೆ, ಭಾನುವಾರ ಒಂದೇ ದಿನ ಎರಡು ಬಾರಿ ಗ್ರಾಮಕ್ಕೆ ನುಗ್ಗಿ 5 ಮೇಕೆ, 11 ಕುರಿಗಳನ್ನು ಕಚ್ಚಿ ಹಾಕಿದೆ. ಭಾನುವಾರ ಮಧ್ಯಾಹ್ನ ಗ್ರಾಮಕ್ಕೆ ನುಗ್ಗಿರುವ ಚಿರತೆ, ಗ್ರಾಮ ನಡುವಿರುವ ಮಂಜುನಾಥರೆಡ್ಡಿ ಎಂಬುವವರ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳನ್ನು ಬಲಿ ಪಡೆದು, 3 ಮೇಕೆಗಳನ್ನು ಗಾಯಗೊಳಿಸಿತ್ತು. ಈ ಕುರಿತು ವಿಷಯ ತಿಳಿದ ಅರಣ್ಯ ಅಧಿಕಾರಿ ಚೇತನ್ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಿ ಸಿದ್ಧತೆ ನಡೆಸಲಾಗಿದೆ ಹಾಗೂ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿ ತೆರಳಿದ್ದರು.

ADVERTISEMENT

ಈ ಘಟನೆಯ ಬೆನ್ನಲ್ಲೆ ಮತ್ತೆ ರಾತ್ರಿ ಗ್ರಾಮಕ್ಕೆ ನುಗ್ಗಿರುವ ಚಿರತೆ, ಮಲ್ಲಪ್ಪ ಎಂಬುವವರಿಗೆ ಸೇರಿದ್ದ ಕುರಿ ದೊಡ್ಡಿಗೆ ನುಗ್ಗಿ 11 ಕುರಿಗಳನ್ನು ಕಚ್ಚಿಹಾಕಿದೆ. ಅಲ್ಲದೆ 12 ಕುರಿಗಳನ್ನು ಗಾಯಗೊಳಿಸಿದೆ. ಪದೇ ಪದೇ ಗ್ರಾಮಕ್ಕೆ ಚಿರತೆ ನುಗ್ಗುತ್ತಿರುವ ಆತಂಕ ಒಂದೆಡೆಯಾದರೆ,ಕುರಿ,ಮೇಕೆ ಸಾಕಿ ಜೀವನ‌ ನಡೆಸುತ್ತಿರುವ ಬಡ ರೈತರನ್ನು ನಷ್ಟಕ್ಕೆ ಕಾರಣವಾಗುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.