
ಆನೇಕಲ್: ಕರುನಾಡು ರೈತ ಗೋಪಾಲಕರ ಸಂಘದಿಂದ ಡಿಸೆಂಬರ್ 12, 13 ಮತ್ತು 14ರಂದು ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಪಟ್ಟಣದ ಎಎಸ್ಬಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಮುಖ್ಯಸ್ಥ ಭಾರತ ಸಾರಥಿ ಹೇಳಿದರು.
ಮಂಗಳವಾರ ನಡೆದ ಕರುನಾಡ ರೈತ ಗೋಪಾಲಕರ ಸಂಘದ ರಾಜ್ಯ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಬಹುಮಾನ ಒಂದು ಲಕ್ಷ, ಎರಡನೇ ಬಹುಮಾನ ₹80ಸಾವಿರ, ಮೂರನೇ ಬಹುಮಾನ ₹60ಸಾವಿರ, ನಾಲ್ಕನೇ ಬಹುಮಾನ ₹40ಸಾವಿರ, ಐದನೇ ₹20ಸಾವಿರ, ಆರನೇ ಬಹುಮಾನ ₹10 ಸಾವಿರ ನಿಗದಿಪಡಿಸಲಾಗಿದೆ ಎಂದರು.
ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರೈತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಗೋಪಾಲಕರು ಡಿಸೆಂಬರ್ 12ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಹಾಲು ಕರೆಯುವ ಯಂತ್ರಗಳನ್ನು ಉಪಯೋಗಿಸಬಾರದು ಎಂದರು.
ಕರುನಾಡು ರೈತ ಗೋಪಾಲಕರ ಸಂಘದ ರಾಜ್ಯಾಧ್ಯಕ್ಷರಾಗಿ ಎಸ್.ಮುನಿರಾಜು, ಉಪಾಧ್ಯಕ್ಷರಾಗಿ ವಣಕನಹಳ್ಳಿ ಮುನಿವೆಂಕಟಪ್ಪ ಗೌರವಾಧ್ಯಕ್ಷ ಕಾವಲಸಳ್ಳಿ ರಮೇಶ್ ರೆಡ್ಡಿ, ಉಪಾಧ್ಯಕ್ಷ ಮುರುಗೇಶ್, ಕಾರ್ಯಾಧ್ಯಕ್ಷ ಎಚ್.ಶ್ರೀನಿವಾಸ ರೆಡ್ಡಿ, ಖಜಾಂಚಿ ಬಿ.ವೈ.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಟಿ.ಚೇತನ್, ನಿರ್ದೇಶಕರಾಗಿ ರಾಜಣ್ಣ, ಅಮರೇಶ್, ಭಕ್ತಿಪುರ ನಾರಾಯಣಪ್ಪ ಆಯ್ಕೆಯಾಗಿದ್ದಾರೆ.
ಸಂಘದ ತಾಲ್ಲೂಕು ಅಧ್ಯಕ್ಷರಾಗಿ ದಿಲೀಪ್ ಗೌಡ, ಉಪಾಧ್ಯಕ್ಷ ಮನೋಜ್, ದರ್ಶನ, ಪ್ರವೀಣ್ ಗೌಡ, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ಕಾರ್ಯದರ್ಶಿ ಸಮಂದೂರು ಮಧು ಮತ್ತು ಖಜಾಂಚಿ ಗಿರೀಶ್ ಹಾಗೂ ಗೌರವಾಧ್ಯಕ್ಷರಾಗಿ ನಾಗಪ್ಪ ಆಯ್ಕೆಯಾದರು.
ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.