ಸೂಲಿಬೆಲೆ: ‘ಗಿಡ ನಕ್ಕರೆ ಜಗ ನಗುವುದು, ಗಿಡ ಉಳಿದರೆ ಜಗ ಉಳಿಯುವುದು’ ಎಂಬ ಸಂದೇಶದೊಂದಿಗೆ ಇಲಾಖೆಯವರು ಬೀದಿನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅರಣ್ಯಗಳು ಮಾನವನ ಉಳಿವಿಗೆ, ಜಗತ್ತಿಗೆ ಎಷ್ಟು ಮುಖ್ಯವಾದವು ಎಂಬುವುದನ್ನು ಮನವರಿಕೆ ಮಾಡಿದರು. ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿ ಕೇಂದ್ರಗಳಲ್ಲಿ ‘ಅರಣ್ಯ ರಕ್ಷಣೆ ಹಾಗೂ ಬೆಂಕಿ ಬೀಳದಂತೆ ಜಾಗೃತಿ’ ಮೂಡಿಸುವ ಬೀದಿನಾಟಕವನ್ನು ಜಾಗೃತಿ ಕಲಾ ತಂಡದವರು ನಡೆಸಿಕೊಟ್ಟರು.
ಅರಣ್ಯಗಳನ್ನು ಸ್ವಾರ್ಥಕ್ಕಾಗಿ ಮನುಷ್ಯ ನಾಶಪಡಿಸುತ್ತಿದ್ದು, ಜಗತ್ತಿನಲ್ಲಿ ನಡೆಯುತ್ತಿರುವ ಅನೇಕ ವೈಪರೀತ್ಯಗಳಿಗೆ ಕಾರಣವಾಗುತ್ತಿದೆ. ಪರಿಸರದ ಸಮತೋಲನಕ್ಕೆ ಅರಣ್ಯಗಳ ಕೊಡುಗೆ ಅಪಾರವಾಗಿದೆ. ಆದರೆ, ಇಂದಿನ ದಿನಗಳಲ್ಲಿ ಗಿಡ ಮರಗಳನ್ನು ಬೇರೆ ಬೇರೆ ಕಾರಣಕ್ಕಾಗಿ ನಾಶ ಮಾಡಲಾಗುತ್ತಿದೆ. ಅದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ತಿಳಿಸಿದರು.
ಕಾಡಿಗೆ ಬೆಂಕಿ ಬಿದ್ದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಬರಗಾಲ ತಾಂಡವವಾಡುತ್ತಿರುವ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಹೊಸಕೋಟೆ ಉಪವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ಅರಣ್ಯ ರಕ್ಷಕ ಗಂಗಪ್ಪ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.