ADVERTISEMENT

ದೊಡ್ಡಬಳ್ಳಾಪುರ: ಪ್ಲಾಸ್ಟಿಕ್‌ ಮುಕ್ತ ಘಾಟಿಗೆ ಪಣ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 2:21 IST
Last Updated 4 ಆಗಸ್ಟ್ 2025, 2:21 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್‌  ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್‌  ಮಾತನಾಡಿದರು   

ತೂಬಗೆರೆ (ದೊಡ್ಡಬಳ್ಳಾಪುರ):  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಸೂಚನೆ ಅನ್ವಯ ಘಾಟಿ ಕ್ಷೇತ್ರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ವಿವಿಧ ಇಲಾಖೆಗಳ ಸಹಕಾರ ಅಗತ್ಯ. ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್‌ ತಿಳಿಸಿದರು.

ತಾಲ್ಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪ್ರಾಧಿಕಾರದ ಕಾರ್ಯಾಲಯದಲ್ಲಿ ‘ಪ್ಲಾಸ್ಟಿಕ್‌ ಮುಕ್ತ ಘಾಟಿ’ ಸಂಬಂಧ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ಪವಿತ್ರ ಯಾತ್ರಾ ಸ್ಥಳದಲ್ಲಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಬಾಹಿರವಾಗಿ ಬಳಕೆ ಹಾಗೂ ಮಾರಾಟ ಮಾಡಿದರೆ ಐಪಿಸಿ 188 ಸೆಕ್ಷನ್‌ ಅನ್ವಯ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಆರು ತಿಂಗಳ ಸೆರೆವಾಸ ವಿಧಿಸಬಹುದು. ದೇವಾಲಯದಲ್ಲಿ ಈಗಾಗಲೇ ಭಕ್ತರ ತಪಾಸಣೆ ಮಾಡಿ ಪ್ಲಾಸ್ಟಿಕ್‌ ಸಾಮಗ್ರಿ ತರದಂತೆ ಸೂಚನೆ ನೀಡಲಾಗುತ್ತಿದೆ. ಇದು ದೇವಾಲಯಕ್ಕಷ್ಟೇ ಸೀಮಿತವಾಗದೇ ಇಡೀ ಕ್ಷೇತ್ರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಬೇಕಿದೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿಯಿಂದ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡುವವರ ಹಾಗೂ ಬಳಕೆದಾರರಿಗೆ ಎಚ್ಚರಿಕೆ ನೀಡಬೇಕು. ನಿರ್ಲಕ್ಷಿಸದರೆ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್‌ ಮುಕ್ತ ಘಾಟಿ ಕ್ಷೇತ್ರ ಎನ್ನುವ ನಾಮ ಫಲಕ ಹಾಕಬೇಕು. ಪೊಲೀಸ್‌ ಇಲಾಖೆ ತಪಾಸಣೆಯಲ್ಲಿ ಸಹಕರಿಸಬೇಕು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಉತ್ಪನ್ನಗಳ ಮೇಲೆ ನಿಗಾವಹಿಸಬೇಕು. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಹ ಈ ಬಗ್ಗೆ ಜಾಗೃತಿ ಫಲಕ ಅಳವಡಿಸಬೇಕೆಂದು ತಿಳಿಸಿದರು.

ಘಾಟಿ ಕ್ಷೇತ್ರ ಪ್ಲಾಸ್ಟಿಕ್‌ ಮುಕ್ತವಾಗಿಸಲು ಪ್ಲಾಸ್ಟಿಕ್‌ ಬದಲಿಗೆ ಪರ್ಯಾಯ ವಸ್ತುಗಳ ಬಳಕೆ ಮಾಡುವ ಕುರಿತು ನಡೆದ ಚರ್ಚೆಯಲ್ಲಿ ಸಭೆಯಲ್ಲಿ ಹಾಜರಿದ್ದವರು ವಿವಿಧ ಸಲಹೆಗಳನ್ನು ನೀಡಿದರು.

ಪ್ಲಾಸ್ಟಿಕ್‌ ಮುಕ್ತ ಘಾಟಿ ಕ್ಷೇತ್ರವನ್ನಾಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು.ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ಷೇತ್ರದ ಸ್ವಚ್ಛತೆ ಸುಂದರವಾಗಿಸಲು ಎಲ್ಲರ ಸಹಕಾರ ಅಗತ್ಯ.
– ಜಿ.ಎನ್‌.ರಂಗಪ್ಪ, ಸದಸ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮನಾಯಕ್‌, ಆರ್‌.ವಿ.ಮಹೇಶ್‌ ಕುಮಾರ್, ಎಂ.ಹೇಮಲತರಮೇಶ್, ದೇವಾಲಯದ ಸಿಬ್ಬಂದಿ ನಂಜಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ಲಾಸ್ಟಿಕ್‌ ಮಾರಾಟ ಮಾಡುವುದಿಲ್ಲ ಎನ್ನುವ ಫಲಕ

ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಪ್ಲಾಸ್ಟಿಕ್‌ ಮಾರಾಟ ಮಾಡುವುದಿಲ್ಲ ಎನ್ನುವ ಫಲಕ ಹಾಕಲು ಸೂಚಿಸಲಾಗಿದೆ. ಘಾಟಿ ಕ್ಷೇತ್ರಕ್ಕೆ ಆಗಮಿಸುವ ಟೋಲ್‌ಗಳಲ್ಲೂ ಸಹ ನಾಮಫಲಕ ಅಳವಡಿಸಲಾಗುವುದು. ಪಂಚಾಯಿತಿಯಿಂದ ಗ್ರಾಮಸ್ಥರಿಗೆ ಹಾಗೂ ಯಾತ್ರಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುವುದು ಎಂದು ಎಸ್‌.ಎಸ್‌.ಘಾಟಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಟಿ.ರಮಿತ ತಿಳಿಸಿದರು.

ಪ್ರಯಾಣಿಕರಿಗೆ ಅರಿವು  ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ‘ಘಾಟಿ ಕ್ಷೇತ್ರ ಪ್ಲಾಸ್ಟಿಕ್‌ ಮುಕ್ತ’ ಎನ್ನುವ ಜಾಗೃತಿ ಮೂಡಿಸಲಾಗುವುದು. ಪ್ರಯಾಣಿಕರು ಪ್ಲಾಸ್ಟಿಕ್‌ ಸಾಮಗ್ರಿಗಳ ಬದಲಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿ ಹೇಳಲಾಗುವುದು. ಬಸ್‌ ಟಿಕೆಟ್‌ಗಳ ಮೇಲೆ ಘಾಟಿ ಕ್ಷೇತ್ರ ಪ್ಲಾಸ್ಟಿಕ್‌ ಮುಕ್ತ ಎನ್ನುವ ಸಂದೇಶವನ್ನು ಮುದ್ರಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ದೊಡ್ಡಬಳ್ಳಾಪುರ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ವೆಂಕಟರಾಘವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.