ಆನೇಕಲ್: ತಾಲ್ಲೂಕಿನ ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಕಲವಾರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘ ಮತ್ತು ಬಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ರೈತರಿಗೆ ಸಾಲ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ವಿಎಸ್ಎಸ್ಎನ್ ಅಧ್ಯಕ್ಷ ಜೆ. ಮಂಜುನಾಥ್ ಮಾತನಾಡಿ, ಸಹಕಾರ ಸಂಘವು ರೈತಸ್ನೇಹಿಯಾಗಿದೆ. ರೈತರಿಗೆ ಅವಶ್ಯಕವಿರುವ ಸಾಲ ಸೌಲಭ್ಯವನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಸಾಲ ಸೌಲಭ್ಯ ದೊರೆತಿರುವುದರಿಂದ ರೈತರು ಖಾಸಗಿಯವರ ಬಳಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವುದು ತಪ್ಪಿದೆ ಎಂದರು.
ಸಾಲ ಸೌಲಭ್ಯಗಳನ್ನು ಯಾವ ಉದ್ದೇಶಕ್ಕಾಗಿ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಬಳಕೆ ಮಾಡಬೇಕು. ವಿಎಸ್ಎಸ್ಎನ್ನಲ್ಲಿ 1,196 ಸದಸ್ಯರಿದ್ದು, ಸಂಘದ ವ್ಯಾಪ್ತಿಯಲ್ಲಿ 14 ಹಳ್ಳಿಗಳಿವೆ. ಶೂನ್ಯ ಬಡ್ಡಿದರದಲ್ಲಿ 293 ರೈತರಿಗೆ ಬೆಳೆ ಸಾಲ ನೀಡಲಾಗಿದೆ. ₹ 2 ಕೋಟಿಗೂ ಹೆಚ್ಚು ಹಣವನ್ನು ಸಾಲವಾಗಿ ವಿತರಿಸಲಾಗಿದೆ ಎಂದು ವಿವರಿಸಿದರು.
18 ಸ್ತ್ರೀಶಕ್ತಿ ಸಂಘಗಳಿದ್ದು, ₹ 1.17 ಕೋಟಿ ಸಾಲ ನೀಡಲಾಗಿದೆ. ಎಲ್ಲಾ ಮಹಿಳೆಯರು ಸಾಲದ ಕಂತುಗಳನ್ನು ಸಕಾಲದಲ್ಲಿ ಮರು ಪಾವತಿಸುತ್ತಿದ್ದಾರೆ. ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿ.ಎಚ್. ಸೋಮಶೇಖರರೆಡ್ಡಿ ಮಾತನಾಡಿ, ಸಹಕಾರ ಸಂಘಗಳ ಸದಸ್ಯರಿಗೆ ಯಶಸ್ವಿನಿ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ₹ 5 ಲಕ್ಷ ವೆಚ್ಚದವರೆಗಿನ ವೈದ್ಯಕೀಯ ಸೌಲಭ್ಯ ಉಚಿತವಾಗಿ ದೊರೆಯುತ್ತದೆ. ವಿಎಸ್ಎಸ್ಎನ್ ಸಂಘಗಳಿಂದ ಕೃಷಿ ಸಾಲ, ಹಸು ಮತ್ತು ಕುರಿ ಸಾಕಾಣಿಕೆ ಸಾಲ, ವಾಣಿಜ್ಯ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ ನೀಡಲಾಗುತ್ತದೆ. ಅರ್ಹ ರೈತರು ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬನ್ನೇರುಘಟ್ಟ ಜಯರಾಮ್, ವೆಂಕಟೇಶ್ಗೌಡ, ಬಿಡಿಸಿಸಿ ಆನೇಕಲ್ ಶಾಖೆಯ ವ್ಯವಸ್ಥಾಪಕ ಕಾರ್ತಿಕೇಯ, ಮೇಲ್ವಿಚಾರಕ ಎಂ. ರಮೇಶ್, ಸಕಲವಾರ ವಿಎಸ್ಎಸ್ಎನ್ ಉಪಾಧ್ಯಕ್ಷ ನವೀನ್ ಕುಮಾರ್, ನಿರ್ದೇಶಕರಾದ ಲೋಕನಾಥ ರೆಡ್ಡಿ, ಮುನಿಚೌಡಪ್ಪ, ಶ್ರೀನಿವಾಸ್, ನಾಗರಾಜು, ನರಸಿಂಹರೆಡ್ಡಿ, ಕೇಶವಮೂರ್ತಿ, ಜಯಲಕ್ಷ್ಮಮ್ಮ, ಅನಿತಮ್ಮ, ಪುಷ್ಪಾವತಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಂದ್ರ, ಶಿಲ್ಪಾ, ಶಾರದ, ರಮೇಶ್, ನಾಗರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.