ವಿಜಯಪುರ:ಪಟ್ಟಣದ ಚನ್ನಕೇಶವಸ್ವಾಮಿ ದೇವಾಲಯ ಸಮೀಪದ ಗಾಯಿತ್ರಿ ಭವನದಲ್ಲಿ ಬುಧವಾರ ಬ್ರಾಹ್ಮಣ ಸೇವಾ ಟ್ರಸ್ಟ್, ಬ್ರಾಹ್ಮಣ ಯುವಕ ಸಂಘ ಹಾಗೂ ವಿಪ್ರ ಬ್ರಾಹ್ಮಣ ಮಹಿಳಾ ಸಂಘದಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಯಿತು.
ನಾಲ್ಕು ವಟುಗಳಿಗೆ ಪುರೋಹಿತರು ಶಾಸ್ತ್ರೋಕ್ತವಾಗಿ ವೇದಘೋಷ ಹಾಗೂ ವಿವಿಧ ಪೂಜಾ ವಿಧಾನಗಳೊಂದಿಗೆ ಉಪನಯನ ಕಾರ್ಯಕ್ರಮ ನಡೆಸಿಕೊಟ್ಟರು.
ಅರ್ಚಕ ಶಿವಗುರು ಶರ್ಮಾ ಮಾತನಾಡಿ, ಉಪನಯನ ಮಾಡಿಸಿಕೊಂಡಿರುವ ವಟುಗಳು ತ್ರಿಕಾಲ ಸಂಧ್ಯಾವಂದನೆ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಬ್ರಾಹ್ಮಣ ಸಮುದಾಯವು ಸಮಾಜದ ಹಿತ ಕಾಪಾಡುವ ಸಮುದಾಯವಾಗಿದೆ. ಹಿರಿಯರು ತಿಳಿಸಿಕೊಡುವಂತಹ ಎಲ್ಲಾ ಉಪದೇಶಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪೋಷಕರು ಕೂಡ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಿಕೊಡುವ ಮೂಲಕ ಜ್ಞಾನವಂತರನ್ನಾಗಿ ಮಾಡುವ ಹೊಣೆಗಾರಿಕೆ ಹೊತ್ತಿದ್ದಾರೆ ಎಂದರು.
ಬ್ರಾಹ್ಮಣ ಸೇವಾ ಟ್ರಸ್ಟ್ ಉಪಾಧ್ಯಕ್ಷ ಎಚ್.ಆರ್. ಶೇಷಗಿರಿರಾವ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಸಲಾಗಿರಲಿಲ್ಲ. ಈ ಬಾರಿ ನಾಲ್ಕು ಮಂದಿ ವಟುಗಳಿಗೆ ಉಪನಯನ ಮಾಡಿದ್ದು, ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುವ ಕಡೆಗೂ ಗಮನಹರಿಸಬೇಕು. ಶಿಕ್ಷಣದಿಂದ ಮಾತ್ರ ಪರಿವರ್ತನೆ ಸಾಧ್ಯ ಎಂದರು.
ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವಿಕಾಸ್ ಶರ್ಮಾ, ಪುರಸಭಾ ಸದಸ್ಯೆ ಶಿಲ್ಪಾ ಅಜಿತ್ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.