ADVERTISEMENT

ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:38 IST
Last Updated 11 ಏಪ್ರಿಲ್ 2019, 13:38 IST
ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್ ಮಾತನಾಡಿದರು
ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್ ಮಾತನಾಡಿದರು   

ದೊಡ್ಡಬಳ್ಳಾಪುರ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಬೇಸಿಗೆ ಶಿಬಿರಗಳು ಅಗತ್ಯ ಎಂದು ಅಭಿನೇತ್ರಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್ ಹೇಳಿದರು.

ಅಭಿನೇತ್ರಿ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ನಡೆದ 10 ದಿನಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

16 ವರ್ಷಗಳಿಂದ ನಿರಂತರವಾಗಿ ಕಲಾಸೇವೆ ಮಾಡಿಕೊಂಡು ಬರುತ್ತಿರುವ ಅಭಿನೇತ್ರಿ ಕಲಾ ಸಂಘ ಬಹುತೇಕ ಪ್ರತಿಭಾವಂತ ನೃತ್ಯಪಟುಗಳನ್ನು ಪರಿಚಯಿಸಿದೆ. ಪ್ರತಿ ವರ್ಷ ಮಕ್ಕಳಿಗೆ ಯೋಗ, ಕ್ರೀಡೆ, ನೃತ್ಯ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಮಕ್ಕಳಿಗೆ ಬೇಸಿಗೆ ಶಿಬಿರದ ಮೂಲಕ ಪರಿಚಯ ಮಾಡಿಕೊಡಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಪ್ರೋತ್ಸಾಹಿಸುವಂತೆ ಮಾಡಲಾಗುತ್ತಿದೆ ಎಂದರು.

ADVERTISEMENT

ಹೆಜ್ಜೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್.ಎಸ್.ಜಿ ಮುಕ್ಕೇನಹಳ್ಳಿ ಮಾತನಾಡಿ ‘ನಮ್ಮ ಹಿಂದಿನ ತಲೆಮಾರಿನ ಮಕ್ಕಳ ಬೇಸಿಗೆ ಶಿಬಿರಗಳು ಪ್ರಾಯೋಗಿಕವಾಗಿದ್ದವು. ಮಕ್ಕಳು ಈಜು, ಅಜ್ಜಿ-ತಾತ ಹೇಳುವ ಕಥೆಗಳು, ಪ್ರಾದೇಶಿಕ ಕ್ರೀಡೆ ಹೀಗೆ ಹತ್ತು ಹಲವು ರೀತಿಯಲ್ಲಿ ಮಣ್ಣಿಗೆ ಹತ್ತಿರವಾಗಿ ಬೇಸಿಗೆ ರಜೆಗಳನ್ನು ಕಳೆಯುತ್ತಿದ್ದರು’ ಎಂದು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ಅಂದಿನ ಮಕ್ಕಳು ಎಲ್ಲರ ಜೊತೆ ಬೆರೆಯುವ ಮೂಲಕ ಸಮಾಜದ ಪ್ರತಿ ಸಂಗತಿಗೂ ಪ್ರಾಯೋಗಿಕವಾಗಿ ಹತ್ತಿರ ಆಗುತ್ತಿದ್ದರು. ಇವೆಲ್ಲವೂ ಅಂದಿನ ಸಮೃದ್ಧಿ ಬದುಕನ್ನು ಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

10 ದಿನ ಶಿಬಿರದಲ್ಲಿ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಮಕ್ಕಳು ಪ್ರದರ್ಶನ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಲಕ್ಷ್ಮಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅನಂತರಾಮ್, ಅಭಿನೇತ್ರಿ ಸಾಂಸ್ಕೃತಿಕ ಸಂಘದ ನಿರ್ದೇಶಕಿ ಪ್ರಭಾವತಿ, ರೇಣುಕಾ, ಮುಖಂಡರಾದ ಮೌಸಿನಾ, ನೃತ್ಯ ಶಿಕ್ಷಕಿ ಚಿನ್ಮಯಿ ಹಾಗೂ ಮಕ್ಕಳ ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.