ADVERTISEMENT

ಹೊಸಕೋಟೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಶರತ್ ಬೆಂಬಲಿತ ‘ಕಾಂಗ್ರೆಸ್ಸಿಗರ’ ಗೆಲುವು!

ಟಿಎಪಿಸಿಎಂಎಸ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 3:07 IST
Last Updated 19 ಅಕ್ಟೋಬರ್ 2020, 3:07 IST
ಶರತ್‌ ಬಚ್ಚೇಗೌಡ
ಶರತ್‌ ಬಚ್ಚೇಗೌಡ    

ಹೊಸಕೋಟೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್) ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ಎಲ್ಲಾ 11 ಸ್ಥಾನಗಳು ಇವರ ಪಾಲಾಗಿವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರು.

‘ಈ ಚುನಾವಣೆಯ ಫಲಿತಾಂಶವು ತಾಲ್ಲೂಕಿನ ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ’ ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.

ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯದಶಮಿ ಸಂದರ್ಭದಲ್ಲಿ ಬಂದಿರುವ ಈ ಗೆಲುವು ತಮಗೆ ಸಂತಸ ತಂದಿದೆ. ತಮ್ಮ ಬೆಂಬಲಿಗರಿಗೂ ಒಂದೇ ರೀತಿಯ ಮತಗಳನ್ನು ನೀಡಿರುವ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

ಸಂಘದ ಚುನಾವಣೆಯು ಪಾರದರ್ಶಕವಾಗಿ ನಡೆದಿದೆ. ಚುನಾವಣೆ ಎದುರಿಸದೆ ಕೆಲವರು ಚುನಾವಣೆಯನ್ನು ಅಕ್ರಮವೆಂದು ಬಹಿಷ್ಕರಿಸಿದ್ದಾರೆ ಎಂದು ದೂರಿದರು.

ಗೆದ್ದ ಅಭ್ಯರ್ಥಿಗಳು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ. ಕೃಷ್ಣಮೂರ್ತಿ ಮತ್ತು ಭತ್ಯಪ್ಪ ಎಂ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿಕೆ 11 ಕ್ಷೇತ್ರಗಳಲ್ಲಿ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ ಕ್ಷೇತ್ರದಿಂದ ಎಚ್.ವಿ. ಆಂಜಿನಪ್ಪ, ರವೀಂದ್ರ ಆರ್‌., ಪರಿಶಿಷ್ಟ ಪಂಗಡಗಳ ಮೀಸಲು ಸ್ಥಾನದಿಂದ ನಾಗರಾಜ್, ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ, ಹೊಸಕೋಟೆ ಟೌನ್ ಮತ್ತು ಕಸಬಾ ಹೋಬಳಿ ಕ್ಷೇತ್ರದಿಂದ ಮಂಜುನಾಥ್ ಎ. ಮತ್ತು ಹನುಮಂತೇಗೌಡ, ಪ್ರವರ್ಗ ಎ ಮೀಸಲು ಕ್ಷೇತ್ರದಿಂದ ಸಿ. ಮುನಿಯಪ್ಪ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಎನ್. ಸುರೇಶ್, ಜಡಿಗೇನಹಳ್ಳಿ ಮತ್ತು ಅನುಗೊಂಡನಹಳ್ಳಿ ಹೋಬಳಿ ಕ್ಷೇತ್ರದಿಂದ ರಮೇಶ್ ಎಚ್.ಕೆ., ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಬಾಬುರೆಡ್ಡಿ ಎಂ. ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ರಾಣಿ ಪಿ. ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.