ADVERTISEMENT

ಸಾಮರ್ಥ್ಯವಿದೆ ಅವಕಾಶಬೇಕು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 16:16 IST
Last Updated 3 ಡಿಸೆಂಬರ್ 2020, 16:16 IST
ವಿಜೇತ ಪದಕಗಳೊಂದಿಗೆ ಭಾಗ್ಯ ಭಾಸ್ಕರ್
ವಿಜೇತ ಪದಕಗಳೊಂದಿಗೆ ಭಾಗ್ಯ ಭಾಸ್ಕರ್   

ದೇವನಹಳ್ಳಿ: ‘ಅಂಗವಿಕಲರಲ್ಲಿ ಅಗಾಧ ಸಾಮರ್ಥ್ಯವಿದೆ. ಅವಕಾಶಗಳು ಸಿಗಬೇಕು ಅಷ್ಟೆ’ ಎನ್ನುತ್ತಾರೆ ಅಂಗವಿಕಲ ಮಹಿಳಾ ಅಂತರರಾಷ್ಟ್ರೀಯ ಕ್ರೀಡಾಪಟು ಭಾಗ್ಯ ಭಾಸ್ಕರ್.

‘ಅಂಗವಿಕಲರಾಗಿ ಹುಟ್ಟಿದ ಆರಂಭದಲ್ಲಿ ನೆರೆಹೊರೆಯವರು ಮಾಡಿದ ಅವಮಾನದಿಂದ, ವಿಚಿತ್ರ ದೃಷ್ಟಿಯಿಂದ ಕಾಣುತ್ತಿದ್ದರು. ಆದರೆ ತಂದೆ ತಾಯಿ ಅತ್ಮೀಯವಾಗಿ ನಮ್ಮನ್ನು ಕಂಡರು. ಎಲ್ಲೋ ಒಂದು ಕಡೆ ಸಾಧನೆ ಅಥವಾ ಒಳ್ಳೆಯ ದಿನಗಳಿರುತ್ತವೆ ಎಂಬ ಭಾವನೆಯನ್ನುಟ್ಟಿಕೊಂಡೆ ಬೆಳೆದೆ. ಒಂದು ಹಂತಕ್ಕೆ ಬಂದಾಗ ಬೇರೆ ಅನೇಕ ಅಂಗವಿಕಲರ ಸಾಧನೆ, ಸಾಮರ್ಥ್ಯ ಕಂಡಾಗ ಅಂಗವಿಕಲ ಎಂಬ ಭಾವನೆಯೇ ಮರೆತು ಹೋಯಿತು. ಕಂಪ್ಯೂಟರ್‌ನಲ್ಲಿ ಡಿಪ್ಲೊಮಾ ಪಡೆದ ನಂತರ ಜೀವನದ ಮಾರ್ಗ ಬದಲಾವಣೆ ಮಾಡಿಕೊಳ್ಳುವ ಒಂದು ದಿಟ್ಟ ನಿಲುವು ಸಿಕ್ಕಿತು’ ಎಂದು ಸ್ಮರಿಸಿಕೊಂಡರು.

‘ಪ್ರಾಥಮಿಕ ಮತ್ತು ಮಾಧ‍್ಯಮಿಕ ಶಾಲೆಗಳ ಕ್ರೀಡಾ ಕೂಟದಲ್ಲಿ ಅಂಗವಿಕಲರಿಗೆ ಅವಕಾಶ ಇರಲಿಲ್ಲ. ಪ್ರತ್ಯೇಕವಾಗಿ ಅಂಗವಿಕಲರಿಗಾಗಿ ನಡೆಸಲಾಗುತ್ತದೆ. ಶಾಲಾ ದಿನಗಳಿಂದ ನನಗೆ ಇಷ್ಟವಾದ ಗುಂಡು ಎಸೆತ ಮತ್ತು ತಟ್ಟೆ ಎಸೆತದಲ್ಲಿ ಭಾಗವಹಿಸುತ್ತಿದ್ದೆ. ತಾಲ್ಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿಯೂ ಪ್ರಶಸ್ತಿ ಜಯಸಿದ್ದೇನೆ. ಇದೇ ನನಗೆ ಅಂತರರಾಷ್ಟ್ರೀಯ ಪ್ರಶಸ್ತಿ ಗೆಲ್ಲಲು ಪ್ರೇರಣೆಯಾಯಿತು’ ಎಂದು ಹೇಳಿದರು.

ADVERTISEMENT

‘2019ರ ಜನವರಿಯಲ್ಲಿ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆದ ಅಂತರರಾಷ್ಟ್ರೀಯ 3ನೇ ಪ್ಯಾರಾಗೇಮ್ಸ್ (ಎ.ಟಿ.ಟಿ.ಎಫ್) ವಿಶಿಷ್ಟಚೇತನರ ವರ್ಗದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಸ್ವರ್ಣ ಪದಕ ಮತ್ತು ತಟ್ಟೆ ಎಸೆತದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದೇನೆ. ಇದು ನನಗೆ ತೃಪ್ತಿ ನೀಡಿದೆ ದೇಹದ ಪ್ರತಿಯೊಂದು ಅಂಗ ಉತ್ತಮವಾಗಿ ಕಾರ್ಯ ಚಟುವಟಿಕೆಗಳಿದಿದ್ದರೂ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನಿಸುತ್ತೆ’ ಎಂದು ಭಾಗ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.