ದೊಡ್ಡಬಳ್ಳಾಪುರ: ಒಂದು ಕಾಲಕ್ಕೆ ಜನರು ‘ನಮ್ಮ ಬೀದಿಯಲ್ಲೂ ಒಂದು ಅಂಚೆ ಪೆಟ್ಟಿಗೆ ಬೇಕು’ ಎಂದು ಬೇಡಿಕೆ ಇಡುತ್ತಿದ್ದರು. ಅಂಚೆ ಕಚೇರಿ ಬೇಕೆಂದು ಮನವಿ ಸಲ್ಲಿಸುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಇಡೀ ಇಲಾಖೆಯೇ ಜನರ ಮನಸ್ಸಿನಿಂದ, ಅಗತ್ಯದಿಂದ ದೂರ ಸರಿಯುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಪ್ರಾಚೀನ ಕಾಲದ ಪಳೆಯುಳಿಕೆಯಂತೆ ಮಳೆ, ಗಾಳಿಗೆ ಮೈಯೊಡ್ಡಿ ನಡು ಬೀದಿಯಲ್ಲಿ ನಿಂತಿರುವ ಅಂಚೆ ಪೆಟ್ಟಿಗೆಯೇ ಸಾಕ್ಷಿ.
ನಗರದ ಕೊಂಗಾಡಿಯಪ್ಪ ಕಾಲೇಜು ಸಮೀಪದ ರಸ್ತೆ ಬದಿಯಲ್ಲಿನ ಅಂಚೆ ಪೆಟ್ಟಿಗೆ ಒಂದು ಕಾಲಕ್ಕೆ ಅಂಚೆ ಪತ್ರಗಳಿಂದ ತುಂಬಿ ಹೋಗುತ್ತಿತ್ತು. ಪ್ರತಿ ದಿನ ಬೆಳಿಗ್ಗೆ 9 ಗಂಟೆ ಒಳಗೆ ಮತ್ತು ಸಂಜೆ 4 ಗಂಟೆ ಒಳಗೆ ದಿನಕ್ಕೆ ಎರಡು ಬಾರಿ ಅಂಚೆ ಪೆಟ್ಟಿಗೆ ತೆರೆದು ಪತ್ರಗಳನ್ನು ಕೊಂಡೊಯ್ಯಲಾಗುತ್ತಿತ್ತು. ಆದರೆ ಈ ಪೆಟ್ಟಿಗೆ ಈಗ ಇರುವ ಸ್ಥಿತಿ ನೋಡಿದರೆಇದರ ಬೀಗ ತೆರೆದು ಅದೆಷ್ಟು ವರ್ಷಗಳು ಕಳೆದಿವೆಯೋ ಅನ್ನುವಂತಿದೆ.
ಕಾಲೇಜು ಸಮೀಪವೇ ಅಂಚೆ ಪೆಟ್ಟಿಗೆ ಇದ್ದುದ್ದರಿಂದ ಈ ಭಾಗದಲ್ಲಿ ವಾಸಿಸುವ ಬಹುತೇಕ ಮಂದಿ, ಆಂಧ್ರಪ್ರದೇಶದ ಭಾಗದಿಂದ ಬಂದು ವಾಸ ಮಾಡುವವರ ಸಂಖ್ಯೆಯೇ ಹೆಚ್ಚಾಗಿದ್ದರಿಂದ ತಮ್ಮೂರುಗಳಲ್ಲಿನ ತಂದೆ, ತಾಯಿ, ಅಕ್ಕ, ಅಣ್ಣ, ಅಜ್ಜಿ, ಅಜ್ಜ, ಮಕ್ಕಳಿಗೆ ಪತ್ರ ಬರೆದು ಈ ಡಬ್ಬದ ಮೂಲಕವೇ ರವಾನಿಸುತ್ತಿದ್ದರು. ಹಲವರ ನಡುವೆ ಪ್ರೇಮಪತ್ರಗಳ ವಿನಿಯಮಕ್ಕೂ ಇದು ವೇದಿಕೆಯಾಗಿತ್ತು.
ಮೊಬೈಲ್ ಬಳಕೆ ಹೆಚ್ಚಾದ ನಂತರ ಮೆಸೇಜ್, ಇ-ಮೇಲ್, ವಾಟ್ಸ್ ಆ್ಯಪ್ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ರವಾನೆಯಾಗುತ್ತಿದೆ. ಹೀಗಿರುವಾಗ ಅಂಚೆ ಪೆಟ್ಟಿಗೆ ಕಡೆ ತಿರುಗಿ ನೋಡುವವರೇ ಇಲ್ಲ. ಪತ್ರ ಬರೆಯುವ ಕಲೆಯೇ ಇಂದು ನಶಿಸಿಹೋಗಿದೆ. ಬರೆದು ಅಂಚೆ ಪೆಟ್ಟಿಗೆ ಇರುವ ಕಡೆ ಹುಡುಕಿ ಬಂದು ಪತ್ರಗಳನ್ನು ಹಾಕುವುದು ಕನಸಿನ ಮಾತು. ಈ ಎಲ್ಲ ಕಾರಣದಿಂದ ಕಾಲದ ಗರ್ಭದಲ್ಲಿ ಅಂಚೆ ಪೆಟ್ಟಿಗೆ ಕಣ್ಮರೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.