ADVERTISEMENT

ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ: ಸಮಾಜ ಸೇವಕ ಸಿ.ಅಶೋಕ್ ಬಾಬು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:40 IST
Last Updated 9 ಅಕ್ಟೋಬರ್ 2020, 6:40 IST
ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾ ಸಂಸ್ಥೆಯಿಂದ ರಂಗ ತರಬೇತಿ ಶಿಬಿರವನ್ನು ಸಮಾಜ ಸೇವಕ ಸಿ.ಅಶೋಕ್ ಬಾಬು ಉದ್ಘಾಟನೆ ಮಾಡಿದರು
ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾ ಸಂಸ್ಥೆಯಿಂದ ರಂಗ ತರಬೇತಿ ಶಿಬಿರವನ್ನು ಸಮಾಜ ಸೇವಕ ಸಿ.ಅಶೋಕ್ ಬಾಬು ಉದ್ಘಾಟನೆ ಮಾಡಿದರು   

ವಿಜಯಪುರ: ‘ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ ನಿರೀಕ್ಷಿಸಬಹುದು. ಹತ್ತು ಹಲವು ಸಾಮಾಜಿಕ ಸಮಸ್ಯೆಗಳಿಗೆ ರಂಗಭೂಮಿ ಮಾತ್ರವೇ ಪರಿಹಾರ ಮಾರ್ಗವಾಗಿದೆ’ ಎಂದು ಸಮಾಜ ಸೇವಕ ಸಿ.ಅಶೋಕ್ ಬಾಬು ತಿಳಿಸಿದರು.

ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದಲ್ಲಿ ಪರಿವರ್ತನಾ ಕಲಾ ಸಂಸ್ಥೆಯಿಂದ 7 ದಿನಗಳ ಉಚಿತ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾ, ದೂರದರ್ಶನ ಮತ್ತು ಮೊಬೈಲ್ ಹಾವಳಿಯ ಮಧ್ಯೆಯೂ ರಂಗ ಚಟುವಟಿಕೆಗಳು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ರಂಗಕಲೆಯ ಬಗ್ಗೆ ಯುವಜನರು ಗಮನಹರಿಸಿದಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಮನುಷ್ಯನ ಸೃಜನಶೀಲ ಪ್ರಕ್ರಿಯೆ ಹೂರಣಗೊಳ್ಳಬೇಕಾದರೆ ತರಬೇತಿ ಶಿಬಿರಗಳ ಕಾರ್ಯ ಶ್ಲಾಘನೀಯ. ಆ ನಿಟ್ಟಿನಲ್ಲಿ ರಂಗ ತರಬೇತಿ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ’ ಎಂದರು.

ADVERTISEMENT

ಪರಿವರ್ತನಾ ಕಲಾಸಂಸ್ಥೆಯ ಅಧ್ಯಕ್ಷ ದೇವನಹಳ್ಳಿ ದೇವರಾಜ್ ಮಾತನಾಡಿ, ‘ಹಿಂದೆಂದಿಗಿಂತಲೂ ಇಂದು ಕನ್ನಡ ರಂಗಭೂಮಿಯಲ್ಲಿ ರಚನಾತ್ಮಕ ಪ್ರಯೋಗಗಳು ಹೆಚ್ಚುತ್ತಿವೆ. ಭಾರತದಲ್ಲಿ ಕೇರಳ ಬಿಟ್ಟರೆ ಕರ್ನಾಟಕ ಅತೀ ಹೆಚ್ಚು ಪ್ರಯೋಗದಲ್ಲಿ ತೊಡಗಿರುವ ರಾಜ್ಯ. ಸಾಹಿತ್ಯಿಕವಾದ ಒಲುವು-ನಿಲುವು ಎಲ್ಲದಕ್ಕೂ ಪ್ರತಿಕ್ರಿಯಾತ್ಮಕವಾಗಿ ರಂಗಭೂಮಿ ಸ್ಪಂದಿಸುತ್ತಾ ಬಂದಿದೆ. ಇಂದಿನ ಸಂದಿಗ್ದ ಸನ್ನಿವೇಶದಲ್ಲಿ ರಂಗ ಕಲೆಯನ್ನು ಉಳಿಸುವುದು ಒಂದು ಸಾಹಸವೇ ಆಗಿದೆ’ ಎಂದರು.

ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಜಿ.ತಿಮ್ಮರಾಜು, ವಿಶ್ವಕರ್ಮ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿಡ್ಲಘಟ್ಟ ಶ್ರೀನಿವಾಸಾಚಾರ್, ಶಾಂತಿನಿಕೇತನ ಟ್ರಸ್ಟ್ ನ ಚಂದನ್, ಸ್ನೇಹಾ ಗಡ್ಡದ ನಾಯಕನಹಳ್ಳಿ ಸುಪ್ರಿಯಾ, ಬೂದಿಗೆರೆ ಭರತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.