ADVERTISEMENT

ಅತ್ತಿಬೆಲೆ | ಇದು ನಿಲ್ದಾಣ ಇಲ್ಲದ ಬಸ್‌ ನಿಲ್ದಾಣ!

ಸಾರಿಗೆ ಸಚಿವರ ತಾಲ್ಲೂಕಿನ ದುಸ್ಥಿತಿ l ಎರಡು ರಾಜ್ಯಗಳ ಕೊಂಡಿಯಾದ ಸ್ಥಳದಲ್ಲಿ ಸುಸಜ್ಜಿತ ನಿಲ್ದಾಣವೇ ಇಲ್ಲ l ಪ್ರಯಾಣಿಕ, ಚಾಲಕರ ಪರದಾಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 4:49 IST
Last Updated 9 ಜೂನ್ 2025, 4:49 IST
ಅತ್ತಿಬೆಲೆಯಲ್ಲಿ ಬಸ್‌ ನಿಲ್ದಾಣ ಇಲ್ಲದೇ ರಸ್ತೆ ಬದಿಗಳಲ್ಲಿ ನಿಲ್ಲುವ ಬಿಎಂಟಿಸಿ ಬಸ್‌ಗಳು
ಅತ್ತಿಬೆಲೆಯಲ್ಲಿ ಬಸ್‌ ನಿಲ್ದಾಣ ಇಲ್ಲದೇ ರಸ್ತೆ ಬದಿಗಳಲ್ಲಿ ನಿಲ್ಲುವ ಬಿಎಂಟಿಸಿ ಬಸ್‌ಗಳು   

ಆನೇಕಲ್: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಮತ್ತು ಗಡಿಭಾಗ ಅತ್ತಿಬೆಲೆಗೆ ಹೊಸಬರು ಬಂದರೆ ಇಲ್ಲಿ ಬಸ್‌ ನಿಲ್ದಾಣ ಎಲ್ಲಿದೆ? ಎಂದು ಕೇಳಿಕೊಂಡು ಹುಡುಕಾಡಲೇಬೇಕು. ಇನ್ನೂ ಅತ್ತಿಬೆಲೆ ಮೂಲಕ ಓಡಾಡುವ ಪ್ರಯಾಣಿಕರು ರಸ್ತೆ ಬದಿಯೇ ನಿಂತು ಬಸ್‌ಗಾಗಿ ಕಾಯಬೇಕು.

–ಇದು ಸಾರಿಗ ಸಚಿವ ರಾಮಲಿಂಗಾರೆಡ್ಡಿ ಅವರ ತವರು ತಾಲ್ಲೂಕಿನ ಸಾರಿಗೆ ವ್ಯವಸ್ಥೆ ವ್ಯಥೆ.

ಮೆಜಿಸ್ಟಿಕ್‌ ಬಿಟ್ಟರೆ ಅತ್ತಿಬೆಲೆಯಲ್ಲಿ ಹೆಚ್ಚು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತವೆ. ಅತ್ತಿಬೆಲೆ ಹೋಬಳಿ ಕೇಂದ್ರವಾದರೂ ಇಲ್ಲಿ ಒಂದು ಬಸ್‌ ನಿಲ್ದಾಣ ಇಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ಬಸ್‌ಗಾಗಿ ಕಾಯಬೇಕು. ರಾಷ್ಟ್ರೀಯ ಹೆದ್ದಾರಿಯನ್ನೇ ನಿಲ್ದಾಣ ಎಂದು ಗುರುತಿಸಲಾಗಿದ್ದು, ಇಲ್ಲಿ ಪ್ರತಿನಿತ್ಯ ಜನರು ಬಿಸಿಲು, ಮಳೆಯಲ್ಲಿ  ಕಾದು ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತವಾದ ಸ್ಥಳವಿಲ್ಲದೆ ಜನರು ಮತ್ತು ಬಸ್‌ಗಳ ಚಾಲಕರು ಪರದಾಡುತ್ತಿದ್ದಾರೆ.

ADVERTISEMENT

ತಾಲ್ಲೂಕಿನ ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ–44 ಹಾದು ಹೋಗುತ್ತದೆ. ಅತ್ತಿಬೆಲೆ ವ್ಯಾಪ್ತಿಯಲ್ಲಿ ಕೈಗಾರಿಕೆ ಪ್ರದೇಶ ಹಾಗೂ ಹೊಸೂರಿಗೆ ಸಂಪರ್ಕ ಕಲ್ಪಿಸುತ್ತಿದೆ. ಇದು ಕರ್ನಾಟಕ ಮತ್ತು ತಮಿಳುನಾಡು ಸಂಪರ್ಕ ರಸ್ತೆಯಾಗಿದೆ. ಇಲ್ಲಿಂದ ನೆರೆ ರಾಜ್ಯ ತಮಿಳುನಾಡಿಗೆ ಮತ್ತು ಕರ್ನಾಟಕಕ್ಕೆ ಪ್ರತಿದಿನ ಸಾವಿರಾರು ಬಸ್‌ಗಳು ಸಂಚಾರ ಮಾಡುತ್ತವೆ. ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿರುತ್ತದೆ. ಎರಡು ರಾಜ್ಯಗಳಿಗೂ ಕೊಂಡಿಯಾದ ಅತ್ತಿಬೆಲೆಯಲ್ಲಿ ಬಸ್‌ ನಿಲ್ದಾಣವಿಲ್ಲ.

ಅತ್ತಿಬೆಲೆ ಮತ್ತು ಹೊಸೂರು ಕೈಗಾರಿಕ ಪ್ರದೇಶವಾಗಿದೆ. ಉದ್ಯೋಗಕ್ಕಾಗಿ, ಶಾಲಾ–ಕಾಲೇಜುಗಳಿಗಾಗಿ ವಿವಿಧ ಕೆಲಸಗಳಿಗಾಗಿ ಜನರ ಓಡಾಟ ನಿರಂತರವಾಗಿರುತ್ತದೆ. ಇಂತಹ ಸ್ಥಳದಲ್ಲಿ ಬಸ್‌ ನಿಲ್ದಾಣವಿಲ್ಲ ನಿರ್ಮಿಸಬೇಕೆಂಬ ಸಾಮಾನ್ಯ ಜ್ಞಾನವು ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಇಲ್ಲವೇ ಎನ್ನುವುದು ಇಲ್ಲಿ ನಿತ್ಯ ಪ್ರಯಾಣಿಸುವ ಜನರ ಆಕ್ರೋಶದ ನುಡಿ.

ಜನರಷ್ಟೇ ರಸ್ತೆಗಳಲ್ಲಿ ನಿಲ್ಲುವುದಿಲ್ಲ ಬಸ್‌ಗಳಿಗೂ ನಿರ್ದಿಷ್ಟ ಸ್ಥಳ ಇಲ್ಲದೆ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ನಿಲುಗಡೆಯಾಗುತ್ತಿವೆ. ಅತ್ತಿಬೆಲೆ ಪೊಲೀಸ್‌ ಠಾಣೆಯಿಂದ ಅತ್ತಿಬೆಲೆ ಟೋಲ್‌ವರೆಗೂ ಬಿಎಂಟಿಸಿ ಬಸ್‌ಗಳು ನಿಲ್ಲುತ್ತವೆ. ಸುಮಾರು 1ಕಿ.ಮೀ ವರೆಗೂ ಬಸ್‌ಗಳಲ್ಲಿ ಎಲ್ಲಂದರಲ್ಲಿ ನಿಂತಿರುತ್ತಿವೆ. ಇದರಿಂದ ಸಂಚಾರಕ್ಕೂ ತೊಡಕಾಗಿದೆ.

ರಸ್ತೆ ಬದಿ ಬಸ್‌ ಇಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಪರದಾಡುತ್ತಿರುವ ಸಾರ್ವಜನಿಕರು

ಸರ್ಜಾಪುರ, ಹೊಸಕೋಟೆ, ದೊಮ್ಮಸಂದ್ರ ಭಾಗಗಳಿಗೆ ಅತ್ತಿಬೆಲೆಯ ಮೂಲಕವೇ ಸಂಚರಿಸಬೇಕು. ತಮಿಳುನಾಡಿನ ಹೊಸೂರು ಸೇರಿದಂತೆ ವಿವಿಧ ಭಾಗಗಳಿಗೆ ಪ್ರತಿದಿನ ಸಾವಿರಾರು ಮಂದಿ ಅತ್ತಿಬೆಲೆಯ ಮೂಲಕ ಓಡಾಡುತ್ತಾರೆ.

ಪ್ರತಿದಿನ ಈ ಮಾರ್ಗದಲ್ಲಿ ಪ್ರತಿದಿನ ಮೂರು ಸಾವಿರ ಶೆಡ್ಯೂಲ್‌ಗಳಲ್ಲಿ ಬಸ್‌ಗಳ ಓಡಾಟವಿದೆ. ಆದರೆ ಬಸ್‌ ನಿಲ್ದಾಣ ಇಲ್ಲ. ಇಲ್ಲೊಂದು ಬಸ್‌ ನಿಲ್ದಾಣ ನಿರ್ಮಿಸಿ ಎಂಬ ದಶಕಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿರುವ ಪ್ರಯಾಣಿಕರು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಾದಚಾರಿ ಮಾರ್ಗವೇ ಬಸ್‌ ನಿಲ್ದಾಣ!
38 ಗುಂಟೆ ಜಾಗ ಮೀಸಲು
ಅತ್ತಿಬೆಲೆ ವೃತ್ತದ ಪಕ್ಕದಲ್ಲಿಯೇ 38 ಗುಂಟೆ ಖಾಲಿ ಜಾಗ ಕೆಎಸ್‌ಆರ್‌ಟಿಸಿಗೆ ಮಂಜೂರಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಈ ಜಾಗವನ್ನು ಹಲವು ಹರ್ಷಗಳಿಂದ ಖಾಲಿ ಬಿಟ್ಟಿದೆ. ಇಲ್ಲಿ ಗಿಡಗೆಂಟಿಗಳು ಬೆಳೆದು ನಿಂತಿವೆ. ಅತ್ತಿಬೆಲೆ ಬಸ್‌ ನಿಲ್ದಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೆಎಸ್‌ಆರ್‌ಟಿಸಿಗೆ ಮಂಜೂರಾಗಿದ್ದ ಜಾಗವನ್ನು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಜಂಟಿಯಾಗಿ ಬಳಸಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ತ್ವರಿತವಾಗಿ ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬಸ್‌ಗಾಗಿ ಕಾಯುತ್ತಿರುವ ಯುವಕರು
ಹೆಚ್ಚಾದ ವಾಹನ ದಟ್ಟಣೆ
ಬೆಂಗಳೂರಿನ ಮೆಜೆಸ್ಟಿಕ್‌ನಿಂದ 10ಸಾವಿರ ಶೆಡ್ಯೂಲ್‌ ಬಸ್‌ಗಳ ಓಡಾಟವಿದೆ. ಅತ್ತಿಬೆಲೆಯಲ್ಲಿ 3ಸಾವಿರ ಶೆಡ್ಯೂಲ್‌ ಬಿಎಂಟಿಸಿ ಬಸ್‌ಗಳ ಓಡಾಟವಿದೆ. ಬೆಂಗಳೂರು ಹೊರತು ಪಡಿಸಿ ಅತ್ತಿಬೆಲೆಯೇ ಅತ್ಯಂತ ಹೆಚ್ಚು ಬಸ್‌ಗಳ ಓಡಾಟವಿರುವ ಸ್ಥಳವಾಗಿದೆ. ಅತ್ತಿಬೆಲೆಯಲ್ಲಿ ಬಸ್‌ಗಳಿಗೆ ನಿಲ್ದಾಣ ಇಲ್ಲದೇ ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತವೆ. ಪ್ರತಿದಿನ ಅತ್ತಿಬೆಲೆಗೆ ಬರುವ ಬಿಎಂಟಿಸಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಬಸ್‌ನಿಲ್ದಾಣ ಇಲ್ಲದೇ ರಸ್ತೆಯುದ್ದಕ್ಕೂ ನಿಂತುಕೊಳ್ಳುತ್ತವೆ. ಇದರಿಂದ ರಸ್ತೆ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ.
ಪರದಾಟ ತಪ್ಪಿಸಿ
ಅತ್ತಿಬೆಲೆಯಲ್ಲಿ ಹೆಚ್ಚು ಬಸ್‌ಗಳ ಸಂಚಾರವಿದ್ದರೂ ಬಸ್‌ ನಿಲ್ದಾಣ ಇಲ್ಲ. ಇದರಿಂದ ರಸ್ತೆ ಬದಿಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದ್ವಿಚಕ್ರ ವಾಹನಗಳ ಸವಾರರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಿ ಬಸ್‌ ನಿಲ್ದಾಣ ಮಂಜೂರು ಮಾಡಬೇಕು- ಸಂಪತ್‌ ಚಿಕ್ಕನಹಳ್ಳಿ ನಿವಾಸಿ
ಕೂಡಲೇ ಕ್ರಮವಹಿಸಿ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಒಂದೇ ಸೂರಿನಡಿ ಬಸ್‌ ನಿಲ್ದಾಣಕ್ಕೆ ಜಾಗದ ವ್ಯವಸ್ಥೆ ಮಾಡಬೇಕು. ಅತ್ತಿಬೆಲೆಗೆ ಬಸ್‌ ನಿಲ್ದಾಣದ ಅವಶ್ಯಕತೆ ಅತ್ಯಂತ ಹೆಚ್ಚಾಗಿದೆ. ಸರ್ಕಾರ ಕೂಡಲೇ ಕ್ರಮ ವಹಿಸಬೇಕು -ತಿಮ್ಮರಾಜು ಅತ್ತಿಬೆಲೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.