ADVERTISEMENT

ಬೈಕ್‌ ಕಳ್ಳರನ್ನು ಹಿಡಿಯಲು ದಾಳಿ ನಡೆಸಿದಾಗ ಎಎಸ್ಐ ಮೇಲೆ ಕಳ್ಳರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 14:02 IST
Last Updated 20 ಏಪ್ರಿಲ್ 2019, 14:02 IST
ಎಎಸ್‌ಐ ಶಿವಲಿಂಗನಾಯಕ್
ಎಎಸ್‌ಐ ಶಿವಲಿಂಗನಾಯಕ್   

ಆನೇಕಲ್ : ತಾಲ್ಲೂಕಿನ ಸೂರ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಚಂದಾಪುರ ಸರ್ಕಲ್‌ನಲ್ಲಿ ಶುಕ್ರವಾರ ರಾತ್ರಿ ಬೈಕ್‌ ಕಳ್ಳರನ್ನು ಹಿಡಿಯುವ ಸಲುವಾಗಿ ದಾಳಿ ನಡೆಸಿದಾಗ ಕಳ್ಳರೇ ಪೊಲೀಸರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ಚಂದಾಪುರ ಸೂರ್ಯಸಿಟಿ ಪೊಲೀಸ್ ಠಾಣೆಯ ಎಎಸ್‌ಐ ಶಿವಲಿಂಗನಾಯಕ್‌ ಅವರು ಶುಕ್ರವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ಮುತ್ತಾನಲ್ಲೂರು ಕಡೆಯಿಂದ ಚಂದಾಪುರಕ್ಕೆ ಬರುತ್ತಿದ್ದರು. ಆಗ ಗಾರ್ಡಾನೀಯ ಹೋಟೆಲ್‌ ಬಳಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವ ಬಗ್ಗೆ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.

ಆರೋಪಿಗಳು ಚಂದಾಪುರದ ಕೀರ್ತನಾ ಹೋಟೆಲ್ ಬಳಿ ಇದ್ದಾರೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಅಲ್ಲಿ ಅನುಮಾನಾಸ್ಪದ ಆರೋಪಿಗಳನ್ನು ಹಿಡಿಯಲು ಯತ್ನಿಸಿದರು. ಆರೋಪಿಗಳು ಶಿವಲಿಂಗನಾಯಕ್ ಅವರ ಮುಖ ಹಾಗೂ ತಲೆಗೆ ಹೊಡೆದು ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಗಾಯಗೊಂಡರೂ ಬಿಡದೇ ಆರೋಪಿಗಳನ್ನು ಹಿಡಿಯುವ ಪ್ರಯತ್ನವನ್ನು ಶಿವಲಿಂಗನಾಯಕ್ ಮಾಡಿದರು. ದುಷ್ಕರ್ಮಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ರಾಮನಿವಾಸ್ ಸಪೆಟ್ ಅವರು ಮಾತನಾಡಿ, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಕೆ.ನಂಜುಂಡೇಗೌಡ ನೇತೃತ್ವದಲ್ಲಿ ನಾಲ್ವರು ಇನ್‌ಸ್ಪೆಕ್ಟರ್‌ಗಳ ತಂಡ ರಚಿಸಲಾಗಿದ್ದು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಶಿವಲಿಂಗ ನಾಯಕ್ ಚಂದಾಪುರ ಚಕ್ರಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.