ಆನೇಕಲ್: ಪಟ್ಟಣಕ್ಕೆ ಸಮೀಪದ ಸಹದೇವಪುರದ ತಿಮ್ಮರಾಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸ್ವಾಮಿಗೆ ವೈಭವದ ವೈರಮುಡಿ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.
ಸಂಜೆ 6ರ ಸುಮಾರಿಗೆ ವೈರಮುಡಿ ಮಾದರಿಯ ಕಿರೀಟ ಧರಿಸಿ ತಿಮ್ಮರಾಯಸ್ವಾಮಿಯನ್ನು ಅಲಂಕರಿಸಲಾಯಿತು. ಅಲಂಕೃತ ಉತ್ಸವ ಮೂರ್ತಿಗೆ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಅವರು ಧಾರ್ಮಿಕ ಪೂಜೆಗಳನ್ನು ನೆರವೇರಿಸಿದ ನಂತರ ದೇವಾಲಯದ ಪ್ರಾಂಗಣದಲ್ಲಿ ಭಕ್ತರು ಸ್ವಾಮಿಯ ಮೂರ್ತಿಯನ್ನು ಹೊತ್ತು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ವೈರಮುಡಿ ಉತ್ಸವದ ಮಾದರಿಯಲ್ಲಿ ಆನೇಕಲ್ನಲ್ಲಿ ಪ್ರತಿ ವರ್ಷ ಉತ್ಸವ ನಡೆಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ದೇವರನ್ನು ಹೊತ್ತ ಭಕ್ತರು ನಾದಸ್ವರ ವಾದ್ಯಕ್ಕೆ ತಕ್ಕಂತೆ ಉತ್ಸವ ಮೂರ್ತಿಯನ್ನು ಕುಣಿಸುತ್ತಾ ದೇವಾಲಯದ ಪ್ರಾಂಗಣವನ್ನು ಪ್ರದಕ್ಷಿಣೆ ನಡೆಸಿದರು. ವೈರಮುಡಿ ಉತ್ಸವವನ್ನು ಶಿವರಾಮಯ್ಯ ಅವರ ಕುಟುಂಬದವರು ನಡೆಸಿಕೊಟ್ಟರು. ಪುರಸಭಾ ಅಧ್ಯಕ್ಷ ಎನ್.ಎಸ್.ಪದ್ಮನಾಭ್, ಸದಸ್ಯೆ ಕವಿತಾ ಅಶ್ವಥ್ ನಾರಾಯಣ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.