ADVERTISEMENT

ರಾಮನಾಥಪುರ ಕೆರೆಯಲ್ಲಿ ಮತ್ತಿಬ್ಬರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 19:45 IST
Last Updated 29 ಮೇ 2023, 19:45 IST

ದೇವನಹಳ್ಳಿ: ವಾರಾಂತ್ಯದ ಮೋಜು ಮಸ್ತಿಗಾಗಿ ತಾಲ್ಲೂಕು ಸಮೀಪದ ನಂದಿ ಬೆಟ್ಟಕ್ಕೆ ಬಂದಿದ್ದ ನಾಲ್ವರು ಯುವಕರು ಕುಂದಾಣ ಹೋಬಳಿಯ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿ ಮೃತರಾಗಿದ್ದ ಪ್ರಕರಣದಲ್ಲಿ ಸೋಮವಾರ ಬೆಳಿಗ್ಗೆ ಮತ್ತೆರೆಡು ಮೃತ ದೇಹಗಳು ಪತ್ತೆಯಾಗಿದ್ದು, ಈಜಲು ತೆರೆಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ ಈಜಲು ಹೋಗಿದ್ದ ವೇಳೆ ಘಟನೆ ನಡೆದಿದ್ದು, ಕೆರೆಯ ಏರಿಯ ಮೇಲೆ ಯುವಕರ ದ್ವಿಚಕ್ರ ವಾಹನ, ಚಪ್ಪಲಿಗಳನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಹಾಯದಿಂದ ಭಾನುವಾರ ತಡರಾತ್ರಿ ಎರಡು ಮೃತದೇಹವನ್ನು ಹೊರತೆಗೆಯಲಾಗಿತ್ತು, ಇನ್ನಿಬ್ಬರು ನಾಪತ್ತೆಯಾಗಿದ್ದರು.

ಆದರೆ, ಸೋಮವಾರ ಬೆಳಿಗ್ಗೆ ಮುಂದುವರೆದ ಶೋಧ ಕಾರ್ಯದಲ್ಲಿ ಆ ಇಬ್ಬರೂ ಯುವಕರ ದೇಹವೂ ನೀರಿನಲ್ಲಿ ಸಿಕಿದ್ದು, ಮೃತದೇಹವನ್ನು ದೇವನಹಳ್ಳಿ ಪಟ್ಟಣದ ಆಕಾಶ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರನ್ನು ಬೆಂಗಳೂರಿನ ಆರ್‌.ಟಿ.ನಗರದ ಶೇಖ್‌ ಥೈರ್, ತೋಹಿದ್, ಶಾಹಿದ್, ಮತ್ತು ಪೈಜಲ್ ಎಂದು ಗುರುತಿಸಲಾಗಿದ್ದು, ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.