ಹೊಸಕೋಟೆ: ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬೋಧನಹೊಸಹಳ್ಳಿ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ದಾಬಸ್ ಪೇಟೆ- ಹೊಸೂರು ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಚಿಕ್ಕತಿರುಪತಿ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯು ಬೋಧನಹೊಸಹಳ್ಳಿಯ ರಸ್ತೆ ತಿರುವಿನಲ್ಲಿರುವ ಹಾಲಿನ ಕೇಂದ್ರದ ಗೋಡೆಗೆ ಡಿಕ್ಕಿ ಹೊಡೆದು, ಪಕ್ಕದ ಮನೆಯ ಒಳಗೆ ನುಗ್ಗಿದೆ. ನಿದ್ರಿಸುತಿದ್ದವರ ಮೇಲೆ ಅದು ಹರಿದಿದೆ. ಪರಿಣಾಮ ಮನೆಯಲ್ಲಿ ಮಲಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ರಘು (26) ಹಾಗೂ ಮಂಜುನಾಥ್ (45) ಎಂದು ಗುರುತಿಸಲಾಗಿದೆ. ಲಾರಿಯು ಮನೆಗೆ ನುಗ್ಗಿರುವ ರಭಸಕ್ಕೆ ಮನೆಯ ಚಾವಣಿ ಸಂಪೂರ್ಣವಾಗಿ ಕುಸಿದಿದೆ. ಮೃತದೇಹಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಕ್ರೇನ್ ಮುಖಾಂತರ ಹೊರ ತೆಗೆಯಲಾಯಿತು.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಪಟ್ ಭೇಟಿ ನೀಡಿ ಪರಿಶೀಲಿಸಿದರು. ಬೆಳಿಗ್ಗೆ 11.30ರ ತನಕ ಕಾರ್ಯಾಚರಣೆ ನಡೆಸಿ ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿಸಲಾಯಿತು. ಲಾರಿ ಮಾಲೀಕರ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಸೋಲಂಕಿ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.