ADVERTISEMENT

ಅಭಿವೃದ್ಧಿ ಕಾಣದ ರಸ್ತೆಗಳು: ಜನರ ಹಿಡಿಶಾಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 13:51 IST
Last Updated 29 ಆಗಸ್ಟ್ 2019, 13:51 IST
ಹದಗೆಟ್ಟಿರುವ ರಸ್ತೆ.
ಹದಗೆಟ್ಟಿರುವ ರಸ್ತೆ.   

ದೇವನಹಳ್ಳಿ: ಈ ರಸ್ತೆ ಕಂಡು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕಾಲಿಟ್ಟರೆ ಯಾವ ಕಡೆ ಬೀಳುತ್ತೇವೋ ಎಂಬ ಭಯದಲ್ಲೇ ಸಂಚಾರ ಮಾಡಬೇಕಾಗಿದೆ. ಜಾರಿ ಬಿದ್ದರೆ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮೂಳೆ ಮುರಿಯುವುದು ಖಚಿತ. ನಗರದ ಮಂಜುನಾಥ ಬಡಾವಣೆ ಮತ್ತು ಶಾಂತಿನಗರ ಉತ್ತರ ಬಡಾವಣೆ ರಸ್ತೆಗಳ ಸ್ಥಿತಿ ಇದು.

ದೇವನಹಳ್ಳಿ ಪುರಸಭೆ 22ನೇ ವಾರ್ಡ್ ವ್ಯಾಪ್ತಿಯ ಮಂಜುನಾಥ್ ಬಡವಾಣೆ 2004ರಲ್ಲಿ ಮೊದಲ ಬಾರಿಗೆ ಬೈಯಾಪದಲ್ಲಿ ಅನುಮತಿ ಪಡೆದು ಅಸ್ತಿತ್ವಕ್ಕೆ ಬಂದಿದೆ. ಅಂದಿನಿಂದ ಇದುವರೆಗೂ ಕುಡಿಯುವ ನೀರಿನ ಪೂರೈಕೆಯಾಗಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಕಿತ್ತು ಹೋಗಿರುವ ರಸ್ತೆಯಲ್ಲಿ ಜಲ್ಲಿ ಹೊರಬಂದು ನೀರು ನಿಲ್ಲುವಂತಾಗಿದೆ. ಜಲ್ಲಿಕಲ್ಲುಗಳಿಂದ ಪಾದಾಚಾರಿಗಳಿಗೆ ಕಿರಿಕಿರಿಯಾಗಿದೆ. ಅಲ್ಲದೆ, ವಿದ್ಯುತ್ ದೀಪದ ವ್ಯವಸ್ಥೆ ಇಲ್ಲಯೂ ಇಲ್ಲವಾಗಿದೆ.

35ರಿಂದ 40ಕುಟುಂಬಗಳು ವಾಸ ಇರುವ ಬಡಾವಣೆಯಲ್ಲಿ ಸಮರ್ಪಕ ಬೀದಿ ದೀಪಗಳಿಲ್ಲ. ಖಾಸಗಿಯಾಗಿ ನೀರು ಖರೀದಿ ಮಾಡುವ ಸ್ಥಿತಿ ಇದೆ. ಬೈಚಾಪುರ ರಸ್ತೆಯಿಂದ ಆಕಾಶ್ ವೈದ್ಯಕೀಯ ಕಾಲೇಜು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮೂಲಕ ರೋಗಿಗಳು ನಡೆದು ಹೋಗಬೇಕಾಗಿದೆ. ಬೂದಿಗೆರೆ, ಬೆಟ್ಟಕೋಟೆ, ಅಣ್ಣೇಶ್ವರ ಮಾರ್ಗದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅಪಘಾತದ ಗಾಯಾಳುಗಳನ್ನು ಇದೇ ಮಾರ್ಗದಲ್ಲಿ ಸಾಗಿಸಬೇಕಾಗಿದೆ. ಮೂಲ ಸೌಲಭ್ಯಕ್ಕೆ ಒತ್ತು ನೀಡದಿದ್ದರೆ ಹೇಗೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ADVERTISEMENT

ಶಾಂತಿನಗರ ಬಡಾವಣೆ ಒಂದೆರಡು ರಸ್ತೆಗಳಿಗೆ ಡಾಂಬರೀಕರಣ ಮತ್ತು ಸಿಮೆಂಟ್ ರಸ್ತೆ ಹೊರತುಪಡಿಸಿದರೆ ಬಹುತೇಕ ರಸ್ತೆಗಳು ಡಾಂಬಾರು ಕಂಡಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಜಣ್ಣ. ‌

‌ಪುರಸಭೆ ಸಮಗ್ರ ಅಭಿವೃದ್ಧಿಗಾಗಿ ₹20 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸದ್ಯಕ್ಕೆ ಯಾವುದೇ ಅನುದಾನ ಬಂದಿಲ್ಲ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.