ADVERTISEMENT

‘ಅರಣ್ಯ ಆಧಾರಿತ ಕೃಷಿಗೆ ಒತ್ತು ನೀಡಿ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:43 IST
Last Updated 20 ಅಕ್ಟೋಬರ್ 2020, 2:43 IST
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಯುಎಸ್‌ಟಿ ಗ್ಲೋಬಲ್ ಕಂಪನಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಕಂಪನಿಯ ಸಿಎಸ್‌ಆರ್‌ ನಿಧಿ ಬಳಕೆಯ ಸಂಯೋಜಕ ಕಿರಣ್‌ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಯುಎಸ್‌ಟಿ ಗ್ಲೋಬಲ್ ಕಂಪನಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಕಂಪನಿಯ ಸಿಎಸ್‌ಆರ್‌ ನಿಧಿ ಬಳಕೆಯ ಸಂಯೋಜಕ ಕಿರಣ್‌ ಮಾತನಾಡಿದರು   

ದೊಡ್ಡಬಳ್ಳಾಪುರ:‘ಬೆಂಗಳೂರಿನ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ರಜಾ ದಿನಗಳಲ್ಲಿ ಮಾಲ್‌ಗಳಲ್ಲಿ ಸುತ್ತಾಡಿ ಕಾಲ ಕಳೆಯುವ ಬದಲು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ’ ಎಂದು ಐಟಿ ಉದ್ಯೋಗಿ ಜಿ. ರಾಜಶೇಖರ್‌ ಹೇಳಿದರು.

ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಯುಎಸ್‌ಟಿ ಗ್ಲೋಬಲ್ ಕಂಪನಿಯಿಂದ ನಡೆದ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ₹ 30 ಸಾವಿರ ಸಂಬಳ ಪಡೆಯುವವರು ಸೇರಿದಂತೆ ಐಟಿ ಉದ್ಯೋಗಿಗಳು ಫ್ಲಾಟ್‌ ಅಥವಾ ಮನೆ ಖರೀದಿಸಿ ಇಡೀ ಉದ್ಯೋಗವನ್ನು ಸಾಲ ತೀರಿಸುವುದರಲ್ಲೇ ಕಳೆಯುತ್ತಾರೆ. ಆದರೆ ಸರಳವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಮನೆ ಖರೀದಿಸುವ ಬೆಲೆಗೆ ಜಮೀನು ಖರೀದಿಸಿ ಅರಣ್ಯ ಆಧಾರಿತ ಕೃಷಿ ಮಾಡಬೇಕು. ತಾವು ಬದುಕಿ, ಪ್ರಾಣಿ– ಪಕ್ಷಿಗಳು ಜೀವಿಸಲು, ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ನಾವು ಸದಾ ಅಭದ್ರತೆಯಿಂದ ದಿನ ಕಳೆಯುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಯುಎಸ್‌ಟಿ ಗ್ಲೋಬಲ್ ಕಂಪನಿಯ ಸಿಎಸ್‌ಆರ್‌ ನಿಧಿ ಬಳಕೆಯ ಸಂಯೋಜಕ ಕಿರಣ್‌ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಹಣವನ್ನು ಪರಿಸರದ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. ಈ ವರ್ಷ ಸಸಿ ಬೆಳೆಸಲು ಅಗತ್ಯ ಇರುವ ಸ್ಥಳ ಗುರುತಿಸಿ ನೆಟ್ಟ ಸಸಿಗಳು ಬೆಳೆಯುವವರೆಗೂ ಜವಾಬ್ದಾರಿಯಿಂದ ನೋಡಿಕೊಳ್ಳಲಾಗುತ್ತದೆ ಎಂದರು.

ಹತ್ತು ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ತಿರುಮಲ ನರ್ಸರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಕಂಪನಿಯ ಉದ್ಯೋಗಿಗಳು ಸಹ ಸಸಿಗಳನ್ನು ನೆಡುವ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತೂಬಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ದೀಕ್ಷಿತ್‌ಕುಮಾರ್‌, ಯುಎಸ್‌ಟಿ ಗ್ಲೋಬಲ್ ಕಂಪನಿಯ ಲತಾ, ವಿಶ್ವಾಸ್‌, ಶಿವಕುಮಾರ್‌, ಅರವಿಂದ್‌, ಸ್ಮಿತಾ, ತಿರುಮಲ ನರ್ಸರಿಯ ಹನುಮಂತರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.