ಆನೇಕಲ್: ಒಳಮೀಸಲಾತಿ ಸಂಬಂಧ ನಡೆಯುತ್ತಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಆನೇಕಲ್ ಭಾಗದಲ್ಲಿ ಬಲಗೈ ಸಮುದಾಯ ಹೊಲೆಯ ಎಂದು ಬರೆಸಬೇಕು. ಈ ಮೂಲಕ ಬಲಗೈ ಸಮುದಾಯದ ಬಲವನ್ನು ಜನಗಣತಿಯಲ್ಲಿ ತೋರಿಸಬೇಕು ಎಂದು ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷೆ ವಾಣಿ ಶಿವರಾಮು ತಿಳಿಸಿದರು.
ಜನಗಣತಿಯಲ್ಲಿ ಬಲಗೈ ಸಮುದಾಯ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗಣತಿದಾರರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಇದರಲ್ಲಿ ಬಲಗೈ ಸಮುದಾಯ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಮೂಲ ಜಾತಿ ಹೊಲೆಯ ಎಂದು ನಮೂದಿಸುವ ಮೂಲಕ ಜಾತಿಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಗಣಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಛಲವಾದಿ ಮಹಾಸಭಾದ ಪೋಷಕ ಬಳ್ಳೂರು ಮುನಿವೀರಪ್ಪ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ನೀಡಲು ಜಾತಿ ಜನಗಣತಿ ನಡೆಸುತ್ತಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪ್ರತಿಯೊಬ್ಬರು ತಮ್ಮ ಮೂಲ ಜಾತಿಯನ್ನು ನಮೂದಿಸಬೇಕು. ಮುಖ್ಯವಾಗಿ ಬಲಗೈ ಸಮುದಾಯ ಹೊಲೆಯ ಎಂದು ಬರೆಸಬೇಕು ಎಂದು ತಿಳಿಸಿದರು.
ಛಲವಾದಿ ಮಹಾಸಭಾದ ರಾಜ್ಯ ಖಜಾಂಚಿ ಮೈಕೋ ನಾಗರಾಜ್, ಮಹಾಸಭಾದಿಂದ ಮನೆ ಮನೆಗೂ ಹೋಗಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಟಿ.ಡಿ.ರಮೇಶ್, ತಾಲ್ಲೂಕು ಮಾಜಿ ಅಧ್ಯಕ್ಷ ಎಸ್.ಮುನಿಯಪ್ಪ, ರಾಜ್ಯ ನಿರ್ದೇಶಕರಾದ ಮಹದೇವಯ್ಯ, ರಾಜಪ್ಪ, ಸಮುದಾಯದ ಮುಖಂಡರಾದ ಹುಲಿಮಂಗಲ ರಾಮ್ಕುಮಾರ್, ಪ್ರಜ್ವಲ್ ಜಿಗಣಿ ಶಂಕರ್, ಹಂದೇನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ರಾಮಪ್ಪ, ಜಿಗಣಿ ಪುರಸಭೆ ಸದಸ್ಯ ಫ್ಯಾನ್ಸಿ ರಮೇಶ್, ತಿರುಪಾಳ್ಯ ಕೃಷ್ಣಪ್ಪ, ಮುನಿರಾಜು, ರುದ್ರಪ್ಪ, ನಾರಾಯಣಸ್ವಾಮಿ, ಚಾಮರಾಜು, ಬ್ಯಾಟರಾಜು, ರಾಮಸಾಗರ ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.