ADVERTISEMENT

ವೀರಭದ್ರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 5:24 IST
Last Updated 21 ಏಪ್ರಿಲ್ 2021, 5:24 IST
ಆನೇಕಲ್ ತಾಲ್ಲೂಕಿನ ಮಾಸ್ತೇನಹಳ್ಳಿಯಲ್ಲಿ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಆನೇಕಲ್ ತಾಲ್ಲೂಕಿನ ಮಾಸ್ತೇನಹಳ್ಳಿಯಲ್ಲಿ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಆನೇಕಲ್: ತಾಲ್ಲೂಕಿನ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಹೋಮ, ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ, ರಥೋತ್ಸವವನ್ನು ಸರ್ಕಾರ ರದ್ದುಗೊಳಿಸಿ
ದ್ದರಿಂದ ಧಾರ್ಮಿಕ ಆಚರಣೆಗಳಿಗೆ ಚ್ಯುತಿ ಬರದಂತೆ ರಥೋತ್ಸವದ ದಿನವಾದ ಮಂಗಳವಾರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಆನೇಕಲ್‌ ತಾಲ್ಲೂಕಿನ ಏಕೈಕ ನಿತ್ಯ ದಾಸೋಹ ಕೇಂದ್ರವಾಗಿರುವ ಮಾಸ್ತೇನಹಳ್ಳಿ ವೀರಭದ್ರಸ್ವಾಮಿ ದೇವಾಲಯವು ಸುತ್ತಮುತ್ತಲ ಗ್ರಾಮಗಳ ಮತ್ತು ತಮಿಳುನಾಡಿನ ಸಹಸ್ರಾರು ಭಕ್ತರ ಆರಾಧ್ಯ ದೈವವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ರಥೋತ್ಸವವನ್ನು ಸ್ಥಗಿತಗೊಳಿಸಲಾಗಿದ್ದು ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಪ್ರತಿ ವರ್ಷ ನಡೆಯುತ್ತಿದ್ದ ಕರಗ, ವೀರಭದ್ರಸ್ವಾಮಿ ಕೊಂಡ ಮತ್ತು ರಥೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ದೇವಾಲಯ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.

ADVERTISEMENT

ಮುಖಂಡ ಗುರುದೇವ್‌ ಮಾತನಾಡಿ, ಧಾರ್ಮಿಕ ಆಚರಣೆಗಳು ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ನೆಲೆಸಲು ಉಪಯುಕ್ತ ಕಾರ್ಯಕ್ರಮಗಳಾಗಿವೆ. ತಲತಲಾಂತರಗಳಿಂದ ಆಚರಣೆಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಜನ ಸೇರುವ ಗುಂಪುಗಳನ್ನು ಕಡಿಮೆ ಮಾಡುವ ಸಲುವಾಗಿ ಆಚರಣೆಗಳಿಗೆ ಕಡಿವಾಣ ಹಾಕಲಾಗಿದೆ. ಜನರಲ್ಲಿ ಆರೋಗ್ಯ ವೃದ್ಧಿಯಾಗಲಿ, ಶಾಂತಿ ನೆಮ್ಮದಿ ದೊರೆಯಲಿ, ಮಹಾಮಾರಿ ಕೊರೊನಾದಿಂದ ದೇಶಕ್ಕೆ ಮುಕ್ತಿ ದೊರೆಯಲಿ ಎಂದು ಪ್ರಾರ್ಥಿಸಿ ವಿಶೇಷ ಹೋಮ ನಡೆಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಕಾಂತರಾಜು, ಲಲಿತಾ, ದೇವಾಲಯ ಟ್ರಸ್ಟ್‌ನ ಕಿರಣ್‌ ಪ್ರಕಾಶ್‌, ಈಶ್ವರಪ್ಪ, ರುದ್ರಾರಾಧ್ಯ, ನಿರಂಜನ್‌, ಪರಮಶಿವಯ್ಯ, ಮುಖಂಡರಾದ ಮರಿರಾಜು, ಅಶೋಕ್‌, ಮರಿಸಿದ್ದಯ್ಯ, ವೀರಭದ್ರಯ್ಯ, ದೇವಾಲಯದ ವ್ಯವಸ್ಥಾಪಕ ಶಿವರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.