
ವಿಜಯಪುರ (ದೇವನಹಳ್ಳಿ): ಭಾನುವಾರ ಸಂಜೆ ಪಟ್ಟಣದ ಮಂಡಿಬೆಲೆ ಸರ್ಕಲ್ ಬಳಿ ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಮತ್ತೊಬ್ಬ ಯುವಕ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿದ್ದಾನೆ. ಚಾಕುವಿನಿಂದ ಇರಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡಿಬೆಲೆ ರಸ್ತೆಯ 9ನೇ ವಾರ್ಡ್ ನಿವಾಸಿ ಶಹಬಾಜ್ ಬಿನ್ ಶಫಿ (21) ಇರಿತಕ್ಕೆ ಒಳಗಾದ ಯುವಕ. ಇದೇ ವಾರ್ಡ್ನ ನವೀನ್ (19) ಬಂಧಿತ.
ಮೊಬೈಲ್ ನೋಡುತ್ತಾ ಕುಳಿತಿದ್ದ ಶಹಬಾಜ್ ಬಳಿ ಬಂದ ನವೀನ್ ಏಕಾಏಕಿ ಚಾಕುವಿನಿಂದ ಎದೆಯ ಬಲ ಭಾಗಕ್ಕೆ ಇರಿದಿದ್ದಾನೆ. ರಕ್ತಸ್ರಾವಕ್ಕೊಳಗಾದ ಯುವಕನನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಯುವಕನ ಮೇಲೆ ನಡೆದಿರುವ ಚಾಕು ಇರಿತದ ವಿಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗ ಡಿವೈಎಸ್ಪಿ ಪಾಡುರಂಗ, ಆರಕ್ಷಕ ನಿರೀಕ್ಷಕ ಪ್ರಶಾಂತ್ ಎಸ್ ನಾಯಕ್, ಪಿಎಸ್ಐ ಸಾಧಿಕ್ ಪಾಷಾ, ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ನವೀನ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.