ADVERTISEMENT

ವಿಜಯಪುರ(ದೇವನಹಳ್ಳಿ): ನೀರಿಲ್ಲದೆ ಬಾಡಿದ ಉದ್ಯಾನ

ಉದ್ಯಾನ ನಿರ್ವಹಣೆಗೆ ಪುರಸಭೆ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:53 IST
Last Updated 24 ಏಪ್ರಿಲ್ 2024, 4:53 IST
ವಿಜಯಪುರ ಮಂಡಿಬೆಲೆ ರಸ್ತೆಯಲ್ಲಿರುವ ಉದ್ಯಾನದಲ್ಲಿ ಬಾಡಿರುವ ಗಿಡಗಳು
ವಿಜಯಪುರ ಮಂಡಿಬೆಲೆ ರಸ್ತೆಯಲ್ಲಿರುವ ಉದ್ಯಾನದಲ್ಲಿ ಬಾಡಿರುವ ಗಿಡಗಳು   

ವಿಜಯಪುರ(ದೇವನಹಳ್ಳಿ): ಮಂಡಿಬೆಲೆ ರಸ್ತೆಯಲ್ಲಿರುವ ಉದ್ಯಾನ ನಿರ್ವಹಣೆಗೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗಿಡಗಳಿಗೆ ನೀರು ಹಾಕದ ಕಾರಣ ಉದ್ಯಾನದ ಗಿಡ–ಮರ ಒಣಗುತ್ತಿವೆ.

ಸುಡುವ ಬಿಸಿಲಿನ ನಡುವೆ, ಮಧ್ಯಾಹ್ನ ಹಾಗೂ ಸಂಜೆಯ ವೇಳೆ ವಿಶ್ರಾಂತಿ ತೆಗೆದುಕೊಳ್ಳಲು ಸುತ್ತಮುತ್ತಲಿನ ಮನೆಗಳಲ್ಲಿನ ಹಿರಿಯರು ಇಲ್ಲಿಗೆ ಬರುತ್ತಿದ್ದರು. ಈಗ ನಿರ್ವಹಣೆಯಿಲ್ಲದೆ ಒಣಗಿ ಹೋಗಿರುವ ಕಾರಣ, ಯಾರೂ ಈ ಕಡೆಗೆ ಸುಳಿಯುತ್ತಿಲ್ಲ.

ಬೆಳಗ್ಗೆ ಹಾಗೂ ಸಂಜೆಯ ವೇಳೆ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಒಣಗಿಹೋಗಿರುವ ಗಿಡಗಳ ನಡುವೆ, ವಾಯುವಿಹಾರ ನಡೆಸಬೇಕಾಗಿದೆ.

ADVERTISEMENT

ಉದ್ಯಾನವನದಲ್ಲಿ ವ್ಯಾಯಾಮ ಮಾಡಲು ಅಳವಡಿಸಿರುವ ಪರಿಕರಗಳು ಮುರಿದು ಹೋಗಿ ವರ್ಷ ಕಳೆದಿದೆ. ಆದರೂ ಅದನ್ನು ದುರಸ್ತಿಗೊಳಿಸಿಲ್ಲ. ಉದ್ಯಾನ ಪಕ್ಕದಲ್ಲಿ ಪುರಸಭೆಯ ಜಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದಾರೆ. ಕೊಳವೆಬಾವಿಯೂ ಇದೆ. ನೆಲಮಟ್ಟದ ನೀರಿನ ಸಂಪು ಇದೆ. ಆದರೆ, ಇಲ್ಲಿಂದ ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡುವವರು ಇಲ್ಲದೆ ಗಿಡಗಳು ಒಣಗಿವೆ.

ಪುರಸಭೆ ಅಧಿಕಾರಿಗಳು ಉದ್ಯಾನ ನಿರ್ವಹಣೆಗೆ ಸೂಚಿಸಬೇಕು. ಶುದ್ಧಕುಡಿಯುವ ನೀರಿನ ಘಟಕದಿಂದ ಹೊರಗೆ ವ್ಯರ್ಥವಾಗಿ ಹೋಗುತ್ತಿರುವ ನೀರನ್ನು ಗಿಡಗಳಿಗೆ ಹರಿಸಿದರೆ ಗಿಡಗಳು ಚಿಗುರುತ್ತವೆ. ಇದರಿಂದ ಉದ್ಯಾನದಲ್ಲಿ ಹಸಿರಿನ ವಾತಾವರಣ ಮತ್ತೆ ನಿರ್ಮಾಣ ಆಗುತ್ತದೆ ಎನ್ನುವುದು ಸ್ಥಳೀಯ ಅಭಿಪ್ರಾಯ.

ಮುರಿದು ಹೋಗಿರುವ ವ್ಯಾಯಾಮ ಪರಿಕರಗಳು

ಉದ್ಯಾನ ನಿರ್ವಹಣೆಗೆ ಸಿಬ್ಬಂದಿ ನೇಮಿಸಲಾಗಿದೆ. ಈ ಕುರಿತು ಕೂಡಲೇ ಆರೋಗ್ಯ ಅಧಿಕಾರಿಗೆ ಸೂಚನೆ ನೀಡಲಾಗುವುದು ಜಿ

-.ಆರ್.ಸಂತೋಷ್ ಕುಮಾರ್ ಮುಖ್ಯಾಧಿಕಾರಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.