
ಪ್ರಜಾವಾಣಿ ವಾರ್ತೆ
ವಿಜಯಪುರ(ದೇವನಹಳ್ಳಿ): ಪಟ್ಟಣದ ಗ್ರಂಥಾಲಯ ಮುಂಭಾಗ ಇರುವ ಸರ್ಕಾರಿ ಉರ್ದು ಪ್ರಾಥಮಿಕ ಬಾಲಕರ ಪಾಠಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಶೌಚಾಲಯದಲ್ಲಿದ್ದ ವೇಳೆ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದ್ದು, ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ.
ಸುಮಾರು 11 ಗಂಟೆಗೆ ಶಾಲೆಯೊಳಗಿದ್ದ ವಿದ್ಯಾರ್ಥಿ ಶಿಕ್ಷಕರನ್ನು ಕೇಳಿ ಶೌಚಾಲಯಕ್ಕೆ ತೆರಳಿದ್ದಾನೆ. ಸ್ಪಲ್ಪ ಸಮಯದ ನಂತರ ಶೌಚಾಲಯದಿಂದ ಜೋರಾದ ಸ್ಫೋಟದ ಶಬ್ಧ ಕೇಳಿ ಬಂದಿದೆ. ವಿದ್ಯಾರ್ಥಿ ಶೌಚಾಲಯದಿಂದ ಹೊರಗೆ ಬಾರದ ಕಾರಣ ಮತ್ತೊಬ್ಬ ವಿದ್ಯಾರ್ಥಿ ಶೌಚಾಲಯಕ್ಕೆ ತೆರಳಿ ನೋಡಿದ್ದಾನೆ. ಅಷ್ಟರೊಳಗೆ ವಿದ್ಯಾರ್ಥಿಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮೈಗೆ ತಾಗಿದೆ. ಕೂಡಲೇ ವಿದ್ಯಾರ್ಥಿ ಶಾಲೆಯ ಶಿಕ್ಷಕರಿಗೆ ವಿಷಯ ತಿಳಿಸಿದ್ದಾನೆ. ಶಿಕ್ಷಕರು ಬೆಂಕಿ ನಂದಿಸಿ ವಿದ್ಯಾರ್ಥಿಯ ಸುಟ್ಟ ಬಟ್ಟೆಗಳನ್ನು ತೆರವುಗೊಳಿಸಿ, ಕೂಡಲೇ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆಗೆ ಕರೆದೊಯ್ದಿದ್ದಾರೆ.
ವಿದ್ಯಾರ್ಥಿ ಮೈಯಲ್ಲಿ ಬೊಬ್ಬೆಗಳು ಬಂದಿದ್ದರಿಂದ ಹೆಚ್ಚುವರಿ ಚಿಕಿತ್ಸೆಗಾಗಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ದಾಖಲಿಸಿದ್ದು, ವಿದ್ಯಾರ್ಥಿಯ ಆರೋಗ್ಯ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ವಿವಿಧ ತನಿಖಾ ತಂಡದಿಂದ ಪರಿಶೀಲನೆ: ಶಾಲೆಯ ಶೌಚಾಲಯದ ಸ್ಫೋಟದ ಸ್ಥಳದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಯಿತು. ಸ್ಫೋಟದ ಸ್ಥಳದಲ್ಲಿ ಸಿಕ್ಕ ಮಾದರಿಗಳನ್ನು ಸಂಗ್ರಹಿಸಲಾಯಿತು. ಶಾಲೆಯ ಸುತ್ತ ಮುತ್ತ ತನಿಖಾ ತಂಡದಿಂದ ಪರಿಶೀಲನೆ ನಡೆಸಲಾಯಿತು.
ಸ್ಥಳಕ್ಕೆ ಐಜಿ ಭೇಟಿ, ಪರಿಶೀಲನೆ: ಘಟನಾ ಸ್ಥಳಕ್ಕೆ ಐಜಿ ಲಾಬೂ ರಾಮ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ತನಿಖೆಯನ್ನು ಸಂಪೂರ್ಣ ಮಾಹಿತಿ ಹೊರಬೀಳಲಿದ್ದು, ಪೋಷಕರು, ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅವಶ್ಯಕವಿಲ್ಲ ಎಂದು ಹೇಳಿದರು.
ಪೋಷಕರು, ಮಕ್ಕಳಲ್ಲಿ ಆತಂಕ: ಸ್ಫೋಟದ ಘಟನೆ ನಂತರ ಸ್ವಲ್ಪ ಸಮಯ ಕಾಲ ಶಾಲೆಯಲ್ಲಿ ಆತಂಕದ ವಾತಾವರಣ ಕಂಡು ಬಂತು. ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪಾಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷ, ವಿಜಯಪುರ ಟೌನ್ ಪೊಲೀಸ್ ಠಾಣೆಯ ಎಸ್ ಐ ಸುನೀಲ್ ಕುಮಾರ್, ತಹಶೀಲ್ದಾರ್ ಅನಿಲ್ಕುಮಾರ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸೇರಿದಂತೆ ಹಲವರು ಭೇಟಿ ನೀಡಿದರು.
ಪ್ರಯೋಗಾಲಯದಿಂದ ನೇರ ಶೌಚಾಲಯಕ್ಕೆ ತೆರಳಿದ್ದ: ಗಾಯಗೊಂಡ ವಿದ್ಯಾರ್ಥಿ ಶೌಚಾಲಯಕ್ಕೆ ತೆರಳುವ ಮುನ್ನ ಶಾಲೆಯ ವಿಜ್ಞಾನ ಪ್ರಯೋಗಾಲಯದ ಕೊಠಡಿಗೆ ತೆರಳಿದ್ದಾನೆ. ವಿಜ್ಞಾನ ಪ್ರಾಯೋಗಿಕ ವಸ್ತುಗಳ ಮಾದರಿಗಳನ್ನು ಶೌಚಾಲಯಕ್ಕೆ ಎತ್ತಿಕೊಂಡು ಹೋಗಿದ್ದಾನೆ. ಅಲ್ಲಿ ವಿದ್ಯಾರ್ಥಿ ಪ್ರಾಯೋಗಿಕ ಪರೀಕ್ಷೆ ಮಾಡುವಾಗ ಜೋರಾಗಿ ಸ್ಫೋಟಗೊಂಡು ಘಟನೆಗೆ ಕಾರಣವಾಗಿದೆ ಎನ್ನಲಾಗಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬೀಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.