
ವಿಜಯಪುರ (ದೇವನಹಳ್ಳಿ): ಪುರಸಭೆಗೆ ಸ್ಪಂತ ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ₹2 ಕೋಟಿ ಅನುದಾನವನ್ನು ಪಟ್ಟಣದ 23 ವಾರ್ಡ್ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಮಾನ ಹಂಚಿಕೆ ಮಾಡಲು ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷೆ ಭವ್ಯ ಮಹೇಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗದೆ ಅನುದಾನವನ್ನು ಸರ್ಕಾರಕ್ಕೆ ವಾಪಸ್ ಹೋಗುವುದನ್ನು ತಡೆಯಲು, ಸದಸ್ಯರ ಒತ್ತಾಯದ ಮೇರೆಗೆ ನಿರ್ಧಾರ ಕೈಗೊಳ್ಳಲಾಯಿತು.
ಕಳೆದ ನಾಲ್ಕು ವರ್ಷಗಳ ಹಿಂದೆ ಪುರಸಭೆಗೆ ಸ್ವಂತ ಕಟ್ಟಡಕ್ಕಾಗಿ ₹2 ಕೋಟಿ ಅನುದಾನ ಮೀಸಲಿಡಲಾಗಿತ್ತು. ನಾನಾ ಕಾರಣಗಳಿಂದ ಕಾಮಗಾರಿ ಆರಂಭಗೊಂಡಿರಲಿಲ್ಲ. ಮಾರ್ಚ್ 31 ರೊಳಗೆ ಈ ಅನುದಾನ ಬಳಕೆ ಮಾಡದಿದ್ದರೆ ಸರ್ಕಾರಕ್ಕೆ ವಾಪಸ್ ಆಗಲಿದ್ದು, ‘ಪಟ್ಟಣದ 23 ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ಪೈಪ್ಲೈನ್ ಸೇರಿದಂತೆ ವಿವಿಧ ಕಾಮಗಾರಿಗಳು ಬಾಕಿ ಇರುವುದರಿಂದ ಅನುದಾನವನ್ನು ಎಲ್ಲಾ ವಾರ್ಡ್ಗಳಿಗೆ ಸಮಾನವಾಗಿ ಹಂಚಿ ತುರ್ತು ಕೆಲಸಗಳನ್ನು ಕೈಗೊಳ್ಳಬೇಕು ಎಂದು ಸದಸ್ಯ ಎಂ.ಸತೀಶ್ಕುಮಾರ್ ಒತ್ತಾಯಿಸಿದರು.
ಇದಕ್ಕೆ ಸದಸ್ಯರಾದ ನಂದಕುಮಾರ್, ರಾಜಣ್ಣ, ಮಂಜುಳಾ ಸೇರಿದಂತೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು. ಬಯಪ ವತಿಯಿಂದ ನೂತನ ಪುರಸಭೆ ಕಟ್ಟಡಕ್ಕೆ ₹6 ಕೋಟಿ ಅನುದಾನ ಬರುವ ನಿರೀಕ್ಷೆ ಇರುವುದರಿಂದ ಸದ್ಯದ ಹಣವನ್ನು ವಾರ್ಡ್ಗಳಿಗೆ ಬಳಸಲು ಸಭೆ ಒಪ್ಪಿಗೆ ನೀಡಿತು.
ಇದೇ ವೇಳೆ ಪರಿಸರ ಅಭಿಯಂತರ ಶೇಖರ್ ರೆಡ್ಡಿ ಅವರು, ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಗೆ ಹಣ ಬಳಸಲು ನೀಡಿದ ಸಲಹೆಯನ್ನು ಸದಸ್ಯರು ತಿರಸ್ಕರಿಸಿದರು.
ಗುತ್ತಿಗೆದಾರರಿಗೆ ನೋಟಿಸ್: ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಆದರೂ ಕೆಲಸ ಆರಂಭಿಸದ ಗುತ್ತಿಗೆದಾರರ ವಿರುದ್ಧ ಸದಸ್ಯ ಹನಿಫುಲ್ಲಾ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸತ್ಯನಾರಾಯಣ, ಕೆಲಸ ಮಾಡದ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದರು.
ಉಪಾಧ್ಯಕ್ಷೆ ತಾಜುನ್ನಿಸ ಮಹಬೂಬ್ ಪಾಷಾ, ಸದಸ್ಯರಾದ ಸಿ.ನಾರಾಯಣಸ್ವಾಮಿ, ರವಿ, ಕೇಶವಪ್ಪ, ರಾಜೇಶ್ವರಿ ಭಾಸ್ಕರ್, ಮಂಜುಳಾ ಮುನಿರಾಜು, ಕವಿತಾ ಮುನಿಅಂಜನಪ್ಪ, ಆಯೆಷಾ, ಎಂ.ನಾರಾಯಣಸ್ವಾಮಿ, ಇಕ್ಬಾಲ್, ಶಿಲ್ಪಾ ಅಜಿತ್, ಶ್ರೀರಾಮ್ ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ತರಾಟೆ
ಸಭೆಯಲ್ಲಿ ಸಾರ್ವಜನಿಕರ ಇ-ಖಾತೆ ವಿಳಂಬದ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆನ್ಲೈನ್ನಲ್ಲಿ ಕಂದಾಯ ಪಾವತಿಸಿದರೂ ಪುರಸಭೆ ದಾಖಲೆಗಳಲ್ಲಿ ಅಪ್ಡೇಟ್ ಆಗುತ್ತಿಲ್ಲ ಎಂದು ಸದಸ್ಯ ನಂದಕುಮಾರ್ ದೂರಿದರು. ವಿಭಾಗ ಪತ್ರ ಹಾಗೂ ಪೌತಿ ಖಾತೆಗಳು ವರ್ಷಗಳಾದರೂ ಆಗುತ್ತಿಲ್ಲ ಎಂದು ಸದಸ್ಯ ಬೈರೇಗೌಡ ಆರೋಪಿಸಿದರು.
ಸಚಿವರ ಭೇಟಿಗೆ ನಿಯೋಗ
ಪಟ್ಟಣದಲ್ಲಿ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತುರ್ತು ಕ್ರಮಕೈಗೊಳ್ಳಲು ಹಾಗೂ ಒಳಚರಂಡಿ ಬೀದಿ ದೀಪ ಸೇರಿದಂತೆ ಇತರೆ ಕಾಮಗಾರಿಗಳ ಶಾಶ್ವತ ಪರಿಹಾರಕ್ಕಾಗಿ ಎಲ್ಲ ಪಕ್ಷದ ಸದಸ್ಯರ ನಿಯೋಗ ಒಟ್ಟಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.