ADVERTISEMENT

ದಲಿತರಿಗೆ ನಿವೇಶನ ನೀಡದೆ ದೌರ್ಜನ್ಯ : ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 14:35 IST
Last Updated 6 ಮಾರ್ಚ್ 2020, 14:35 IST
ಪ್ರತಿಭಟನಾನಿರತ ದಲಿತ ಮುಖಂಡರು
ಪ್ರತಿಭಟನಾನಿರತ ದಲಿತ ಮುಖಂಡರು   

ದೇವನಹಳ್ಳಿ: ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ಈಸ್ತೂರು ಗ್ರಾಮದಲ್ಲಿ ದಲಿತರಿಗೆ ನಿವೇಶನ ನೀಡದೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ದಲಿತರ ಪರಿವರ್ತನಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಈಸ್ತೂರು ನಾರಾಯಣಸ್ವಾಮಿ, ಗ್ರಾಮದಲ್ಲಿ 60ದಲಿತ ಕುಟುಂಬಗಳು ಕಳೆದ 20 ವರ್ಷಗಳಿಂದ ವಾಸವಾಗಿವೆ. ನಿವೇಶನಕ್ಕಾಗಿ ಹೋರಾಟ ನಡೆಸಿದರೂ ಸ್ಥಳೀಯ ಪ್ರಭಾವಿಗಳ ಮರ್ಜಿಯಂತೆ ಬಿಜೆಪಿ ಮುಖಂಡ ಎಂ.ಟಿ.ಬಿ ನಾಗರಾಜ್ ಪೊಲೀಸರ ಪ್ರಭಾವ ಬಳಿಸಿ ದಲಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಲಿತರು ದೂರು ನೀಡಿದರೂ ಪ್ರಯೋಜನವಿಲ್ಲ ಎಂದು ಆರೋಪಿಸಿದರು.

ದಲಿತರ ಕಾಲೊನಿಗೆ ಗ್ರಾಮ ದೇವತೆಗಳು ಮೆರವಣಿಗೆ ಹೋಗದಂತೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಸರ್ಕಾರಿ ಗೋಮಾಳ ಜಾಗವನ್ನು ಕೆಲ ಪ್ರಭಾವಿಗಳು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಸಮಿತಿ ಪ್ರಧಾನ ಕಾರ್ಯದರ್ಶಿ ಕೇಶವ ಮಾತನಾಡಿ, ಸ.ನಂ7ರಲ್ಲಿ ಸರ್ಕಾರಿ ಗೋಮಾಳ 11ಗುಂಟೆ, ಸ.ನಂ.3ರಲ್ಲಿ 1.18ಎಕರೆ, ಸ.ನಂ.1ರಲ್ಲಿ 7.15 ಎಕರೆ, ಸ.ನಂ59ರಲ್ಲಿ 19ಗುಂಟೆ ಜಾಗವಿದೆ. ಇದರ ಜತೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸ.ನಂ.5,7,3ರಲ್ಲಿ ದಲಿತರಿಗೆ ನಿವೇಶನ ಹಕ್ಕುಪತ್ರ ನೀಡಿದೆ. ಆದರೆ, ಒತ್ತುವರಿ ಮಾಡಿಕೊಳ್ಳಲಾಗಿದೆ. ತೆರವುಗೊಳಿಸಲು ಆದೇಶ ನೀಡಿದ್ದರೂ ತಹಶೀಲ್ದಾರ್ ಒತ್ತುವರಿದಾರರ ಪರವಾಗಿ ನಿಂತಿದ್ದಾರೆ. ಸ.ನಂ.7ರಲ್ಲಿ ದಲಿತರಿಗೆ ನೀಡಿದ ಸಾಗುವಳಿ ಹಕ್ಕು ಪತ್ರದ ದಾಖಲೆ ಕಡತವನ್ನೇ ನಾಪತ್ತೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಉಪಾಧ್ಯಕ್ಷ ಚೆಲುವರಾಜು, ಖಜಾಂಚಿ ನಾಗರಾಜು ಸದಸ್ಯರಾದ ಲೋಕೇಶ್, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.