ADVERTISEMENT

ಅಮಿಷಕ್ಕೆ ಒಳಗಾಗದೆ ಮತ ನೀಡಿ:

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 13:38 IST
Last Updated 25 ಜನವರಿ 2020, 13:38 IST
ರಾಷ್ಟ್ರೀಯ ಮತದಾನ ದಿನವನ್ನು ನ್ಯಾಯಾಧೀಶ ಎ.ಹರೀಶ್ ಉದ್ಘಾಟಿಸಿದರು
ರಾಷ್ಟ್ರೀಯ ಮತದಾನ ದಿನವನ್ನು ನ್ಯಾಯಾಧೀಶ ಎ.ಹರೀಶ್ ಉದ್ಘಾಟಿಸಿದರು   

ದೇವನಹಳ್ಳಿ: ಬಲಿಷ್ಠ ಭಾರತ ನಿರ್ಮಾಣ ಯುವ ಸಮುದಾಯದ ಜವಬ್ದಾರಿಯಾಗಿದ್ದು ಅಮಿಷಕ್ಕೆ ಒಳಗಾಗದೆ ಮತ ಚಲಾಯಿಸಿಬೇಕಾಗಿದೆ ಎಂದು ಜಿಲ್ಲಾ 5ನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಧೀಶ ಎ.ಹರೀಶ್ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಗರ ಪ್ರದೇಶದಲ್ಲಿರುವ ಪ್ರಜ್ಞಾವಂತ ನಾಗರಿಕರೇ ಮತದಾನಕ್ಕೆ ಮುಂದಾಗದಿರುವುದು ಶೇಕಡವಾರು ಮತದಾನ ಪ್ರಕ್ರಿಯೆಯಿಂದ ತಿಳಿಯುತ್ತದೆ. ಮತದಾನ ಮಾಡದಿದ್ದರೆ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳನ್ನು ಪ್ರಶ್ನಿಸಿ ಪರಿಹಾರ ಕಂಡುಕೊಳ್ಳುವ ನೈತಿಕೆಯನ್ನು ಕಳೆದುಕೊಳ್ಳತ್ತೇವೆ ಎಂದು ಹೇಳಿದರು.

ADVERTISEMENT

ಶೇಕಡವಾರು ಕಡಿಮೆ ಪ್ರಮಾಣದ ಮತದಾನದಿಂದ ಸಧೃಡ ಭಾರತ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಮತದಾನ ನಾವು ಸಂವಿಧಾನಕ್ಕೆ ನೀಡುವ ಗೌರವ ಮತ್ತು ಸಂವಿಧಾನ ನೀಡಿರುವ ಅತ್ಯುನ್ನತ ಅಧಿಕಾರವಾದ ಮತದಾನದಲ್ಲಿ ಪಾಲ್ಗೊಂಡು ಇತರರಿಗೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, 1947 ರಲ್ಲಿ ಭಾರತ ಸ್ವತಂತ್ರ್ಯ ಪಡೆದ ನಂತರ ಐದು ವರ್ಷಗಳ ತಾತ್ಕಾಲಿಕ ಸರ್ಕಾರವಿತ್ತು. ಸಂವಿಧಾನ ರಚನೆಯಾಗಿ ಅಂಗೀಕಾರಗೊಂಡ ನಂತರ ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. 2011 ರಲ್ಲಿ ಮತದಾನ ಜಾಗೃತಿ ಮೂಲಕ ಸಶಕ್ತ ಭಾರತ ನಿರ್ಮಾಣ ಮಾಡಲು ಚುನಾವಣ ಆಯೋಗ ನಿರ್ಧರಿಸಿದೆ ಎಂದು ವಿವರಿಸಿದರು.

ಮೊದಲು ಮತದಾನ 21 ವರ್ಷಕ್ಕೆ ನಿಗದಿಗೊಳಿಸವಾಗಿತ್ತು, 1988 ರಿಂದ 18 ವರ್ಷಕ್ಕೆ ವಯೋಮಿತಿ ನಿಗದಿಗೊಳಿಸಲಾಗಿದೆ ಎಂದು ಹೇಳಿದರು. ದೇಶದಲ್ಲಿ 130 ಕೋಟಿ ಜನ ಸಂಖ್ಯೆ ಪೈಕಿ 90 ಕೋಟಿ ಮತದಾರರಿದ್ದಾರೆ. ಬಲಿಷ್ಠ ಭಾರತಕ್ಕಾಗಿ ನಮ್ಮ ಮತ ಎಂಬ ಸಂಕಲ್ಪವಾಗಬೇಕು ಎರಡು ಕಡೆ ಮತಪಟ್ಟಿಯಲ್ಲಿ ಹೆಸರು ಇರುವಂತಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಶಾಂತಿಯುತ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಿ ನಿಖರವಾದ ಫಲಿತಾಂಶ ಚುನಾವಣಾ ಆಯೋಗ ನೀಡುತ್ತಿದೆ. ಇತ್ತೀಚೆಗೆ ಹೊಸಕೋಟೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಗರಿಷ್ಠ ಮತದಾನ ನಡೆದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಮತದಾನ ಜಾಗೃತಿ ಶಿಬಿರಗಳು ನಡೆಯುತ್ತಿವೆ. ಚುನಾವಣಾ ಪಾಠ ಶಾಲೆ ಆರಂಭಗೊಂಡಿದೆ. ಮತ ನೋಂದಣಿಗೆ ಅಧಿಕಾರಿಗಳು ಮನೆ ಬಾಗಿಲಿಗೆ ಬರುತ್ತಾರೆ. ದೇಶದ ಭವಿಷ್ಯ ಮತದಾರರ ಪಟ್ಟಿಯಲ್ಲಿದೆ. ಕೇವಲ ಹಕ್ಕಿಗಾಗಿ ಹೋರಾಡದೆ ಕರ್ತವ್ಯವು ನಿಮ್ಮದಾಗಬೇಕು ಎಂದು ಹೇಳಿದರು.

ತಹಶೀಲ್ದಾರ್ ಆಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.