ADVERTISEMENT

ದೇವನಹಳ್ಳಿ: ಸಮುದಾಯ ಭವನದಲ್ಲಿ ಕಸ ಸಂಗ್ರಹ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 7:59 IST
Last Updated 15 ಫೆಬ್ರುವರಿ 2024, 7:59 IST
ದೇವನಹಳ್ಳಿಯ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ  ಲಕ್ಷ್ಮೀಪುರ ಗ್ರಾಮದ ಸಮುದಾಯ ಭವನ
ದೇವನಹಳ್ಳಿಯ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ  ಲಕ್ಷ್ಮೀಪುರ ಗ್ರಾಮದ ಸಮುದಾಯ ಭವನ   

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಲಕ್ಷ್ಮೀಪುರದ ಸಮುದಾಯ ಭವನದಲ್ಲಿ ವಿಶ್ವನಾಥಪುರ ಗ್ರಾ.ಪಂ ಸಿಬ್ಬಂದಿ ಕಸ ಸಂಗ್ರಹಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಸಮುದಾಯದ ಬಳಕೆಗೆ ಉಪಯೋಗವಾಗಬೇಕಿದ್ದ ಭವನವನ್ನು, ದುರಸ್ತಿ ಮಾಡಿ ಸಾರ್ವಜನಿಕ ಉಪಯೋಗಕ್ಕೆ ವಿನಿಯೋಗಿಸುವ ಬದಲು ಗ್ರಾ.ಪಂ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಸೋಲೂರಿನ ಮಧು ದೂರಿದ್ದಾರೆ.

2008ರಲ್ಲಿ ₹10 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಿದ್ದು, ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಸಿಬ್ಬಂದಿ ವರ್ಗ ನಿರ್ಲಕ್ಷ್ಯತೆಯಿಂದಾಗಿ ಪಾಳು ಬಿದ್ದಿದ್ದ ಪರಿಸ್ಥಿತಿಗೆ ತಲುಪಿದೆ. ಇದರಲ್ಲಿ ಸ್ವ ಉದ್ಯೋಗ ಘಟಕ, ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಸಮುದಾಯಕ್ಕೆ ಉಪಯೋಗಿಸಬೇಕು' ಎಂದು ಆಗ್ರಹಿಸಿದ್ದಾರೆ.

ADVERTISEMENT

ಈಗಾಗಲೇ ಬ್ಯಾಡರಹಲ್ಲಿ ಸಮೀಪ ನೂತನ ಘನ ತ್ಯಾಜ್ಯ ವಿಲೇವಾರಿ ಘಟಕವೂ ನಿರ್ಮಾಣವಾಗಿದ್ದರೂ ವಿಶ್ವನಾಥಪುರ ಗ್ರಾ.ಪಂ ಮಾತ್ರ ಸಮುದಾಯ ಭವನದಲ್ಲಿ ತಾತ್ಕಲಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಶಿಥಿಲಗೊಂಡಿರುವ ಭವನವನ್ನು ದುರಸ್ತಿ ಮಾಡಿ ಸದುಪಯೋಗ ಪಡಿಸಿಕೊಳ್ಳಲು ಚಿಂತನೆ ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಲಕ್ಷ್ಮೀಪುರ ಸಮುದಾಯಭವನವನ್ನು ತಾತ್ಕಾಲಿಕವಾಗಿ ತ್ಯಾಜ್ಯ ಸಂಗ್ರಹಣೆಗಾಗಿ ಬಳಸಿಕೊಳ್ಳಲಾಗಿದೆ. ಆ ಜಾಗದಲ್ಲಿ ಮುಂದಿನ ದಿನಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶವಿದೆ.
–ಬೀರೇಶ್, ಪಿಡಿಒ ವಿಶ್ವನಾಥಪುರ ಗ್ರಾ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.