ADVERTISEMENT

ಆನೇಕಲ್ | ಪತ್ನಿ ಪ್ರಶಂಸಾ ದಿನ: ನಿನ್ನನ್ನು ಪಡೆದ ನಾನೇ ಭಾಗ್ಯವಂತ...

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:02 IST
Last Updated 1 ಸೆಪ್ಟೆಂಬರ್ 2025, 2:02 IST
ಆನೇಕಲ್ ಸಮೀಪದ ಕಾವಲಹೊಸಹಳ್ಳಿಯ ಅರಿವಿನ ಶ್ರೀಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಪತ್ನಿ ಪ್ರಶಂಸಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಟ್ರಸ್ಟ್ನ ಉಪಾಧ್ಯಕ್ಷೆ ವಿಜಯ ನಾಗರಾಜು ಮಾತನಾಡಿದರು
ಆನೇಕಲ್ ಸಮೀಪದ ಕಾವಲಹೊಸಹಳ್ಳಿಯ ಅರಿವಿನ ಶ್ರೀಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಪತ್ನಿ ಪ್ರಶಂಸಾ ದಿನ ಕಾರ್ಯಕ್ರಮವನ್ನುದ್ದೇಶಿಸಿ ಟ್ರಸ್ಟ್ನ ಉಪಾಧ್ಯಕ್ಷೆ ವಿಜಯ ನಾಗರಾಜು ಮಾತನಾಡಿದರು   

ಆನೇಕಲ್:  ಹೆತ್ತವರು, ಹುಟ್ಟಿದ ಮನೆ–ಊರು ಬಿಟ್ಟು ಬಂದು ನನ್ನೊಂದಿಗೆ ಇಷ್ಟು ಕಾಲ ಅನ್ಯೋನ್ಯವಾಗಿ ಬದುಕುವ, ಕುಟುಂಬವನ್ನೆ ಪೊರೆಯುವ ಭೂತಾಯಿ ಗುಣದ ನಿನ್ನನ್ನು ಪಡೆಯಲು ತಪ್ಪಸ್ಸು ಮಾಡಿದ್ದೆ...

ಇಂತಹ ಪತ್ನಿಯನ್ನು ಹೊಗಳುವ ಮಾತು ಕೇಳಿ ಬಂದಿದ್ದು, ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್‌ ಪಟ್ಟಣಕ್ಕೆ ಸಮೀಪದ ಕಾವಲಹೊಸಹಳ್ಳಿಯ ಅರಿವಿನ ಶ್ರೀಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಪತ್ನಿ ಪ್ರಶಂಸಾ ದಿನ’ದಲ್ಲಿ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ 300ಕ್ಕೂ ಹೆಚ್ಚು ಜೋಡಿಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಗಂಡಂದಿರು ತಮ್ಮ ಹೆಂಡತಿಯರಿಗೆ ಗುಲಾಬಿ ಹೂವು ನೀಡಿ ಹಾಡಿ ಹೊಗಳಿದರು.

ADVERTISEMENT

ಹಿರಿ ಜೋಡಿಗಳಿಂದ ಇತ್ತೀಚಿಗೆ ವಿವಾಹವಾದವರು ಸಹ ಪಾಲ್ಗೊಂಡು ಪರಸ್ಪರ ಪ್ರೀತಿ, ಗೌರವದಿಂದ ಕಾಣುವ ಸಂಕಲ್ಪ ಮಾಡಿದರು.

ಪ್ರತಿಯೊಬ್ಬ ಪುರುಷನ ಯಶಸ್ಸಿನಲ್ಲಿ ಮಹಿಳೆಯ ಪಾತ್ರ ಇರುತ್ತದೆ. ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ ಪುರುಷನ ಯಶಸ್ಸಿಗೆ ಕೈಜೋಡಿಸುತ್ತಾಳೆ. ಹಾಗಾಗಿ ಮಹಿಳೆಯರನ್ನು ಪ್ರೀತಿ, ಗೌರವದಿಂದ ಕಾಣಬೇಕಾದ್ದು ಪುರುಷರ ಪ್ರಥಮ ಜವಾಬ್ದಾರಿ. ಪತ್ನಿ ಮತ್ತು ತಾಯಿಯೊಂದಿಗೆ ಮಾತನಾಡುವ ಪದಗಳು ದೇವರನ್ನು ಪೂಜಿಸುವ ಮಂತ್ರದಂತಿರಬೇಕು ಎಂದು ಟ್ರಸ್ಟ್‌ ಅಧ್ಯಕ್ಷ ಉಮಾಪತಿ ತಿಳಿಸಿದರು.

ವೇದಾದ್ರಿ ಮಹರ್ಷಿ ಧರ್ಮಪತ್ನಿ ಲೋಗಾಂಬಾಳ್‌ ಅವರ ಜನ್ಮದಿನದ ಪ್ರಯುಕ್ತ 21 ವರ್ಷದಿಂದ ಪತ್ನಿ ಪ್ರಶಂಸಾ ದಿನ ಆಚರಿಸಲಾಗುತ್ತಿದೆ.  ವಿಚ್ಛೇದನ ಕಡಿಮೆ ಮಾಡಲು ಇಂತಹ ಆಚರಣೆಗಳು ಅವಶ್ಯಕವಾಗಿವೆ. ಪತ್ನಿ ಪತ್ನಿಯಲ್ಲಿ ಹೊಂದಾಣಿಕೆ, ಒಗ್ಗಟ್ಟು ಮೂಡಿಸುವುದು ನಮ್ಮ ಗುರಿ ಎಂದು ತಿಳಿಸಿದರು.

ವಿಶಾಲ ಕರ್ನಾಟಕನ ವಲಯ ಮುಖ್ಯಸ್ಥ ನಾಗರಾಜು, ಸ್ಕೈ ಟ್ರಸ್ಟ್‌ನ ಖಜಾಂಚಿ ಭಯರೇಗೌಡ, ಪದಾಧಿಕಾರಿಗಳಾದ ರಾಮಚಂದ್ರ ಪ್ರಸಾದ್, ಪದ್ಮನಾಭಯ್ಯ ಶಿವಗಾಮಿನಿ, ಸತೀಶ್, ರಮೇಶ್, ಭ್ರಮಾರಂಭ, ಸುಬ್ರಮಣಿ, ವೆಂಕಟಸ್ವಾಮಿರೆಡ್ಡಿ, ಸಂಪಂಗಿ ರಾಮನಾಯಕ್‌ ಇದ್ದರು.

ಆನೇಕಲ್ ಸಮೀಪದ ಕಾವಲಹೊಸಹಳ್ಳಿಯ ಅರಿವಿನ ಶ್ರೀಮಂದಿರದಲ್ಲಿ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್ ವತಿಯಿಂದ ಪತ್ನಿ ಪ್ರಶಂಸಾ ದಿನದಲ್ಲಿ ಪತಿಯರು ತಮ್ಮ ಪತ್ನಿಯರಿಗೆ ಗುಲಾಬಿ ಹೂವು ಮುಡಿಸುತ್ತಿರುವ ದೃಶ್ಯ
ಪತ್ನಿಯು ಮನೆಗಳಲ್ಲಿ ಸಮಸ್ಯೆ ನುಂಗುವ ನೀಲಕಂಠರಾಗಿರುತ್ತಾರೆ. ಹಲವು ಒತ್ತಡಗಳ ನಡುವೆಯೂ ಕುಟುಂಬಕ್ಕಾಗಿ ಸಮಯ ಮತ್ತು ಪ್ರೀತಿ ನೀಡುವ ಕುರುಣಾಮಯಗಳು.
ಗೋವಿಂದರಾಜ ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್‌
ಜಗಳ ಕರಿಮಣಿ ಸರದಲ್ಲಿ ಬಂಗಾರ ಪೋಣಿಸಿದಂತೆ...
‘ಗಂಡ–ಹೆಂಡತಿಯರ ನಡುವೆ ಆತ್ಮ ಸಮ್ಮೀಲನ ಅವಶ್ಯಕ. ಕರಿಮಣಿ ಸರದಲ್ಲಿ ಬಂಗಾರ ಪೋಣಿಸಿದಂತೆ ಕುಟುಂಬದಲ್ಲಿ ಆಗಾಗ್ಗೆ ಪತಿ ಪತ್ನಿಯರು ಜಗಳವಾಡುತ್ತಿರಬೇಕು. ಜಗಳದಲ್ಲಿಯೂ ಪ್ರೀತಿ ನಂಬಿಕೆ ವಿಶ್ವಾಸ ಇರಬೇಕು. ಪತಿ–ಪತ್ನಿಯರಿಬ್ಬರು ತಮ್ಮ ವಂಶ ವೃಕ್ಷವನ್ನು ತೆಗೆಯದೇ ಜಗಳಾವಾಡಬೇಕು. ಇಬ್ಬರಲ್ಲಿಯೂ ಕ್ಷಮಾ ಗುಣವಿರಬೇಕು. ಗಂಡನ ಹಿತಕ್ಕಾಗಿ ಮಂಗಳಗೌರಿ ಪೂಜೆ ಭೀಮನ ಅಮಾವಸ್ಯೆ ಸೇರಿದಂತೆ ಹಲವು ಪೂಜೆಗಳಿವೆ. ಆದರೆ ಪತ್ನಿಯ ಒಳಿತಿಗಾಗಿ ಯಾವ ಪೂಜೆಯೂ ಇಲ್ಲ’ ಎಂದು ವಿಶಾಲ ಕರ್ನಾಟಕ ಸ್ಕೈ ಟ್ರಸ್ಟ್‌ನ ವಿಜಯ ನಾಗರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.