ADVERTISEMENT

ಮಹಿಳೆ ಆತ್ಮಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಪೊಲೀಸ್ ಠಾಣೆ ಆವರಣದಲ್ಲಿ ಮೃತರ ಸಂಬಂಧಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:31 IST
Last Updated 18 ಜೂನ್ 2019, 14:31 IST
ಆರೋಪಿಗಳನ್ನು ಬಂಧಿಸುವಂತೆ ಠಾಣೆಯ ಮುಂದೆ ಸಂಬಂಧಿಕರು ಪ್ರತಿಭಟನೆ ನಡೆಸಿದರು
ಆರೋಪಿಗಳನ್ನು ಬಂಧಿಸುವಂತೆ ಠಾಣೆಯ ಮುಂದೆ ಸಂಬಂಧಿಕರು ಪ್ರತಿಭಟನೆ ನಡೆಸಿದರು   

ದೇವನಹಳ್ಳಿ: ನಗರದ ಮಂಜುನಾಥ ನಗರದ ಬಡಾವಣೆಯಲ್ಲಿ ಸೋಮವಾರ ಮಹಿಳೆ ಮಂಜುಳಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಂತೆ ಮೃತರ ಸಂಬಂಧಿಕರು ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಮೃತರ ಸಂಬಂಧಿ ರಾಮಪ್ಪ ಮಾತನಾಡಿ, ‘ಮನೆಯ ಮಾಲೀಕ ಸೋಮಶೇಖರ್ ಮತ್ತು ಅವರ ಪತ್ನಿ ಗೀತಾ ಹಾಗೂ ಮಗಳು ಬಿಂದು, ಮನೆ ಖಾಲಿ ಮಾಡಿಸುವ ಹುನ್ನಾರದಿಂದ ನೀರಿನ ವಿಚಾರದ ನೆಪದಲ್ಲಿ ಗಲಾಟೆ ಮಾಡಿ ಬಾಡಿಗೆದಾರರಾದ ಸುಬ್ರಮಣಿ ಮತ್ತು ಪತ್ನಿ ಮಂಜುಳಾ ಅವರ ಮೇಲೆ ಮನೆಯ ಬಳಿ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದರು.

‘ಹಲ್ಲೆ ನಡೆಸಿದ ನಂತರ ಅವರೇ ಬಂದು ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರ ಮೂಲಕ ಠಾಣೆಗೆ ಕರೆಯಿಸಿ ಠಾಣೆಯಲ್ಲಿ ಮತ್ತೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಅಮಾಯಕ ಹೆಣ್ಣುಮಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮುನಿರಾಜು ಮಾತನಾಡಿ, ‘ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದ ನಂತರ ಠಾಣೆಯಿಂದ ಹೊರಹೋಗುವ ವೇಳೆ ಪೊಲೀಸರ ಮುಂದೆಯೇ ಮೃತರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸಾರ್ವಜನಿಕರಿಗೆ ಮತ್ತು ನೊಂದವರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಯ ಪ್ರಭಾವಕ್ಕೆ ಒಳಗಾಗಿ ಪರೋಕ್ಷವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ’ ಎಂದು ದೂರಿದರು.

‘ಘಟನೆ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಂಬಂಧಿ ರಾಜಣ್ಣ ಮಾತನಾಡಿ, ‘ಠಾಣೆ ಮುಂದೆ ಪೊಲೀಸರ ಎದುರು ಆರೋಪಿಗಳು ಹಲ್ಲೆ ಮಾಡಿದ ನಂತರ ಸೌಮ್ಯ ಸ್ವಭಾವದ ಮಂಜುಳಾ ಅವಮಾನಿತಳಾಗಿ ಪತಿಯನ್ನು ಆಸ್ಪತ್ರೆಗೆ ಕಳುಹಿಸಿ ವಿಡಿಯೋಧ್ವನಿ ಮುದ್ರಣ ಮಾಡಿ, ಹಲ್ಲೆ ನಡೆಸಿದ ಆರೋಪಿಗಳ ಹೆಸರನ್ನು ಮತ್ತು ಪೊಲೀಸರ ಕರ್ತವ್ಯ ಪ್ರಸ್ತಾಪಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಪರಿಸ್ಥಿತಿ ಏನು, ಪೊಲೀಸರು ಈ ರೀತಿ ಮಾಡಿದರೆ ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುವ ಸಾರ್ವಜನಿಕರ ಪಾಡೇನು. 24 ತಾಸು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಅವರು ಯಾರ ಮರ್ಜಿಗೆ ಒಳಗಾಗಿದ್ದಾರೆ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.