ಬಂಧನ
(ಪ್ರಾತಿನಿಧಿಕ ಚಿತ್ರ)
ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಯುವತಿಯೊಬ್ಬರ ಮದುವೆ ವಿಚಾರವಾಗಿ ಉಂಟಾದ ವೈಷಮ್ಯ ಹಿಂಸಾತ್ಮಕ ರೂಪ ಪಡೆದು ಮಹಿಳೆಯೊಬ್ಬರು ಸಾವಿಗೀಡಾದ ಪ್ರಕರಣ ಶುಕ್ರವಾರ ನಡೆದಿದೆ.
ಮೃತರನ್ನು ರೇಣುಕಾ (45) ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪಿ ರಂಜಿತ್, ಅವರ ತಾಯಿ ರಾಧಮ್ಮ, ಅಣ್ಣ ನವೀನ್ ಮತ್ತು ಸಂಬಂಧಿ ಗಣೇಶ್ ವಿರುದ್ಧ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ರಂಜಿತ್ ವಿರುದ್ಧ ರೇಣುಕಾ ಅವರ ಪುತ್ರಿಯೊಂದಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಬಳಿಕ ಆರೋಪಿಗೆ ನ್ಯಾಯಾಲಯ ದೋಷಮುಕ್ತ ತೀರ್ಪು ನೀಡಿತ್ತು. ನಂತರ ಯುವತಿಯೊಂದಿಗೆ ಮದುವೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು.
ಘಟನೆ ವಿವರ: ಶುಕ್ರವಾರ ಸಂಜೆ ಆರೋಪಿ ರಂಜಿತ್, ರೇಣುಕಾ ಅವರ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮದುವೆ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ. ಮಾತು ಹಿಂಸಾಚಾರಕ್ಕೆ ತಿರುಗಿ ರೇಣುಕಾ ಮತ್ತು ಅವರ ಕುಟುಂಬದವರ ಮೇಲೆ ದೈಹಿಕ ಹಲ್ಲೆ ನಡೆದಿದೆ.
ದಾಳಿಯಲ್ಲಿ ರೇಣುಕಾ ಅವರ ಎದೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರ ಮಗನಿಗೆ ಕಣ್ಣು ಮತ್ತು ಕೈಗೆ ಗಾಯವಾಗಿದೆ. ಜಗಳ ಬಿಡಿಸಲು ಹೋದ ವೃದ್ಧೆ ಮುನಿರತ್ನಮ್ಮ ಎಂಬುವರ ಮೇಲೂ ಹಲ್ಲೆ ನಡೆದಿದೆ.
ಗಾಯಾಳು ರೇಣುಕಾ ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.