ದೇವನಹಳ್ಳಿ: ಇಲ್ಲಿನ ಸರ್ವ ಶಕ್ತಾತ್ಮಕ ಚೌಡೇಶ್ವರಿ ದೇವಿಗೆ ದೇವಾಂಗ ಸಮುದಾಯದ ಭಕ್ತರು ಅಲಗು ಸೇವೆ ಸಮರ್ಪಿಸಿದರು.
ಸೇವೆ ಕುರಿತು ಮಾಹಿತಿ ನೀಡಿದ ದೇವಾಂಗ ಸಮುದಾಯದ ಹಿರಿಯ ನಾಗರಿಕ ಹನುಮಂತಪ್ಪ ಮಾತನಾಡಿ, ’ದೇವಾಂಗ ಅಥವಾ ತೋಗಟ ವೀರ ಸಮುದಾಯ ಪರಂಪರೆಯಿಂದ ಈ ಅಲಗು ಸೇವೆಯನ್ನು ವಾರ್ಷಿಕವಾಗಿ ಆಚರಿಸುತ್ತಾ ಬಂದಿದೆ. ಕೆಲವು ವರ್ಷಗಳಿಂದ ಚೌಡೇಶ್ವರಿ ದೇವಾಲಯ ನೂತನವಾಗಿ ನಿರ್ಮಾಣ ಮಾಡಿ ಪ್ರತಿಷ್ಠಾಪಿಸಿದ ನಂತರ ಮುಂದುವರೆಸಲಾಗಿದೆ‘ ಎಂದು ಹೇಳಿದರು.
’ಹುಟ್ಟಿದ ಮಾನವ ತನ್ನ ಜೀವನದಲ್ಲಿ ಅನೇಕ ರೀತಿಯ ಪ್ರಮಾದ ಎಸಗುತ್ತಾನೆ. ಅದರ ಪಶ್ಚಾತಾಪಕ್ಕೆ ಅಲಗು ಸೇವೆಯ ಮೂಲಕ ತಪ್ಪನ್ನು ಮುನ್ನಿಸು ತಾಯಿ ಎಂಬುದರ ಸಂಕೇತವಾಗಿ ಈ ಆಚರಣೆ. ಇದನ್ನು ಮಾಡುವ ಮೊದಲು ಜನಿವಾರ ಬದಲಾಯಿಸಬೇಕು‘ ಎಂದು ಹೇಳಿದರು.
ಚೌಡೇಶ್ವರಿ ಟ್ರಸ್ಟ್ ನ ನಿರ್ದೇಶಕ ಪಿ.ಗಂಗಾಧರ್ ಮಾತನಾಡಿ, ’ಅಲಗು ಸೇವೆಗೆ ಶತಮಾನಗಳ ಇತಿಹಾಸವಿದೆ. ಪ್ರಸ್ತುತ ರಾಜ್ಯದಲ್ಲಿ ತಲೆದೂರಿಸುವ ಜಲ ಪ್ರಳಯ ಮತ್ತೊಂದು ಕಡೆ ಬರ ಪರಿಸ್ಥಿತಿಯಿಂದ ಲಕ್ಷಾಂತರ ಕುಟುಂಬಗಳು ತತ್ತರಿಸುತ್ತಿವೆ‘ ಎಂದರು.
’ಇದನ್ನೆಲ್ಲ ಪರಿಹರಿಸು ತಾಯಿ ಎಂಬುದು ದೇವಾಂಗ ಸಮುದಾಯ ವತಿಯಿಂದ ಹೋಮ ಹವನ ಚೌಡೇಶ್ವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಬೇಡಿ ಕೊಂಡಿದ್ದೇವೆ‘ ಎಂದು ಹೇಳಿದರು.
ಬೈಯಾಪ ಮಾಜಿ ಅಧ್ಯಕ್ಷ ಸಿ. ಅಶ್ವಥ್ ನಾರಾಯಣ, ಪ್ರಭಾರ ತಹಶೀಲ್ದಾರ್ ಬಾಲಕೃಷ್ಣ, ಕೆಪಿಸಿಸಿ ರಾಜ್ಯ ಹಿಂದುಳಿದ ಘಟಕ ಉಪಾಧ್ಯಕ್ಷ ಸಿ. ಜಗನ್ನಾಥ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ದೇ.ಸು. ನಾಗರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬರೀಷ್ ಗೌಡ, ಮುಖಂಡರಾದ ವಿಜಯಕುಮಾರ್, ಜಯರಾಮ್, ಗಂಗಾಧರಪ್ಪ, ಗೋಪಾಲ್, ಹನುಮಂತಪ್ಪ, ಅಶ್ವಥ್, ಎ.ಚ್. ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.