ಶನಿವಾರಸಂತೆ: ಸಮೀಪದ ಕಾಜೂರು ಗ್ರಾಮದ ಹಸೈನಾರ್ ಮುಸ್ಲಿಯಾರ್ ಗೋಪಾಲಪುರದ ಬದ್ರಿಯಾ ಮದ್ರಸದಲ್ಲಿ 20 ವರ್ಷಗಳಿಂದ ಅಧ್ಯಾಪಕರಾಗಿದ್ದರು. ಕೊವಿಡ್-19 ಹಿನ್ನಲೆ ಮದ್ರಸ 6 ತಿಂಗಳಿನಿಂದ ಮುಚ್ಚಲ್ಪಟ್ಟು ಅಧ್ಯಾಪಕ ವೃತ್ತಿ ಸ್ಥಗಿತಗೊಂಡಿತು. ಜೀವನ ನಿರ್ವಹಣೆ ಕಷ್ಟಕರವಾಯಿತು. ಶಾಲೆ ಬಾಗಿಲು ತೆರೆಯಲು ಸರ್ಕಾರ ಮೀನ-ಮೇಷ ಎಣಿಸುತ್ತಿರುವುದರಿಂದ ಹಸೈನಾರ್ ಸಂಸಾರ ನಿರ್ವಹಣೆಗೆ ಬದಲಿ ವ್ಯವಸ್ಥೆ ಬಗ್ಗೆ ಆಲೋಚಿಸಿದರು.ವ್ಯಾಪಾರ ಆರಂಭಿಸಲು ನಿರ್ಧರಿಸಿದರು.
ಸೆಪ್ಟೆಂಬರ್ ಮೊದಲ ದಿನದಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ತರಕಾರಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರು. ಹಾಸನ, ಅರಕಲಗೂಡಿನಿಂದ ತರಕಾರಿ ತಂದು ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರ ಅನುಕೂಲಕರವಾಗಿ ನಡೆಯುತ್ತಿದೆ.
’ಅರಬಿ ಶಾಲೆ ಶುರುವಾಗುವವರೆಗೆ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತೇನೆ. ಶನಿವಾರಸಂತೆ ಸುತ್ತಮುತ್ತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಿದೆ. ಈ ಪಿಡುಗು ಆದಷ್ಟು ಬೇಗ ತೊಲಗಲಿ. ಜನರು ಹೆದರಿಕೆ ಬಿಟ್ಟು, ಹೊಣೆ ಅರಿತು, ಜೀವನ ಸಾಗಿಸುವಂತಾಗಲಿ. ಪ್ರತಿಯೊಬ್ಬರು ಅಂತರ ಕಾಯ್ದು, ಮಾಸ್ಕ್ ಧರಿಸಿ ಸರ್ಕಾರದ ನಿಯಮ ಪಾಲಿಸಿದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ’ ಎಂದು ಹಸೈನಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.