ಬೆಳಗಾವಿ: ಶಾಸಕ ಅಭಯ ಪಾಟೀಲ ನೇತೃತ್ವದ ಪರಿವರ್ತನಾ ಪರಿವಾರ ಸಂಸ್ಥೆಯು ಇಲ್ಲಿಗೆ ಸಮೀಪದ ನಾನಾವಾಡಿಯಲ್ಲಿರುವ ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಮೈದಾನದಲ್ಲಿ ಶನಿವಾರದಿಂದ ನಾಲ್ಕು ದಿನಗಳ ಕಾಲ 7ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸಿದೆ.
ಉತ್ಸವದಲ್ಲಿ ಸ್ಥಳೀಯರೂ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸುಮಾರು 30 ಜನರು ಗಾಳಿಪಟ ಹಾರಿಸುವವರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರಾದ ಸತೀಶ ಕುಲಕರ್ಣಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.
ಬೆಳಗಾವಿಯ ಸಂದೇಶ ಕಡ್ಡಿ, ಎಂ.ಎಸ್. ಕಡ್ಡಿ, ಧಾರವಾಡದ ಪ್ರಸನ್ನ ಮಿಶ್ರಿಕೋಟಿ, ಶಂಕರ, ದೊಡ್ಡಬಳ್ಳಾಪುರದ ಪ್ರಕಾಶ, ಎಲ್.ಎನ್. ಶ್ರೀನಾಥ, ಬೆಂಗಳೂರಿನ ಎಲ್.ಎಂ. ಸುಹಾಸ್, ಗಿರೀಶ ರಾವ್, ವಿ.ಕೆ. ರಾವ್, ಕೆ.ಪಿ. ಸುನೀಲ್, ಎಂ.ದರ್ಶನ್, ಎಂ.ಪ್ರವೀಣ, ಸುರೇಶ ಪಾಲ್ಗೊಳ್ಳಲಿದ್ದಾರೆ ಎಂದು ವಿವರಣೆ ನೀಡಿದರು.
ಕೇರಳ, ಮಹಾರಾಷ್ಟ್ರ, ಗುಜರಾತ್ದಿಂದಲೂ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ವಿದೇಶಿ ವಿಭಾಗದಲ್ಲಿ ಕೆನಡಾ, ಇಂಗ್ಲೆಂಡ್, ಜರ್ಮನಿ, ಮಲೇಷ್ಯಾ, ರಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಇಂಡೋನೆಷ್ಯಾ, ಸಿಂಗಪುರ, ಹಾಂಕಾಂಗ್ ಸೇರಿದಂತೆ ವಿವಿಧ ದೇಶಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಲ್ಇಡಿ ಗಾಳಿಪಟ ವಿಶೇಷ: ಶನಿವಾರ ಹಾಗೂ ಭಾನುವಾರ ಎರಡು ದಿನಗಳವರೆಗೆ ದೇಶೀಯ ಹಾಗೂ ವಿದೇಶಿಗರು ಗಾಳಿಪಟ ಹಾರಿಸಲಿದ್ದಾರೆ. ರಾತ್ರಿ ವೇಳೆ ಎಲ್ಇಡಿ ಪರದೆಯಿಂದ ತಯಾರಿಸಲಾದ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಇದು ನೋಡುಗರನ್ನು ಆಕರ್ಷಿಸಲಿದೆ. ಸೋಮವಾರ ಸ್ಥಳೀಯರಿಗೆ ವಿಶೇಷವಾಗಿ ಮಕ್ಕಳು ಹಾಗೂ ಯುವಕರು ಹಾರಿಸಲಿದ್ದಾರೆ ಎಂದರು.
ಸೋಮವಾರ ಯುವಜನ ಮೇಳ ನಡೆಯಲಿದೆ. ಚಿತ್ರಕಲೆ, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಬಿಸಿಗಾಳಿ ಬಲೂನ್ ಉತ್ಸವ ನಡೆಯಲಿದೆ.
ಮಂಗಳವಾರ ರಸಪ್ರಶ್ನೆ, ಫ್ಯಾಶನ್ ಶೋ, ಪಟಾಕಿ ಸಿಡಿಸುವ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮ ಆಯೋಜಕರಾದ ಅಶೋಕ ನಾಯ್ಕ, ಗಣೇಶ ಮಳಲೀಕರ, ದೀಪಕ ಗೋಜಗೆಕರ, ಚೈತನ್ಯ ಕುಲಕರ್ಣಿ ಹಾಗೂ ಸಂದೇಶ ಕಡ್ಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.