ಮೂಡಲಗಿ: ಸಮೀಪದ ಅವರಾದಿ ಗ್ರಾಮದ ಬಸ್ ನಿಲ್ದಾಣದ ಹತ್ತಿರವಿರುವ ಮತ್ತು ಕುಲಗೋಡದ ಲಕ್ಷ್ಮಿನಗರದಲ್ಲಿರುವ ಕುಡಿಯುವ ನೀರಿನ ಓವರ್ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಅವರಾದಿ ಗ್ರಾಮದಲ್ಲಿ ಎರಡಡೂವರೆ ದಶಕದ ಪೂರ್ವದಲ್ಲಿ ನಿರ್ಮಿಸಿರುವ ಟ್ಯಾಂಕ್ ಸಂಪೂರ್ಣ ಬಿರುಕುಬಿಟ್ಟು ನೀರು ಸೋರುತ್ತಿದ್ದು, ಕಂಬದಲ್ಲಿಯ ಕಬ್ಬಿಣ ತೆರೆದುಕೊಂಡು ಅಪಾಯ ಸೂಚಿಸುತ್ತಲಿವೆ. ಈ ಟ್ಯಾಂಕ್ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಹೊಂದಿರಕೊಂಡಿರುವುದರಿಂದ ಶಾಲಾ ಮಕ್ಕಳು ಶಿಕ್ಷಕರು ಕೈಯಲ್ಲಿ ಜೀವಹಿಡಿದು ಶಾಲೆಗೆ ಬರಬೇಕಾಗಿದೆ. ಅದು ಅಲ್ಲದೆ ಟ್ಯಾಂಕಿನಲ್ಲಿ ಪಾಚಿ ಸಂಗ್ರಹವಾಗಿ, ಹುಳಗಳು ಸೃಷ್ಟಿಯಾಗಿವೆ.
ಗ್ರಾಮಕ್ಕೆ ಬಿಡುವ ನೀರಿನಲ್ಲಿ ಪಾಚಿ ಮತ್ತು ಹುಳುಗಳು ಬರುತ್ತಿದ್ದು ಇದನ್ನು ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಟ್ಯಾಂಕ್ ಕುಸಿದು ಬೀಳುವ ಪೂರ್ವದಲ್ಲಿ ಇದರ ಬಗ್ಗೆ ಗಮನ ಹರಿಸಿ ಹೊಸ ಟ್ಯಾಂಕ್ ನಿರ್ಮಿಸಬೇಕು ಎಂಬುವುದು ಜನರ ಆಗ್ರಹವಾಗಿದೆ.
ಇನ್ನು ಕುಲಗೋಡ ಗ್ರಾಮದ ಲಕ್ಷ್ಮಿನಗರ ಹತ್ತಿರ ಇರುವ ಓವರ್್ ಟ್ಯಾಂಕಿನ ಸಮಸ್ಯೆ ಅವರಾದಿ ಟ್ಯಾಂಕಿಗಿಂತ ಭಿನ್ನವಾಗಿಲ್ಲ. ಎರಡು ದಶಕದ ಹಳೆಯದಾದ 1 ಲಕ್ಷ ನೀರಿನ ಸಾರ್ಮರ್ಥ್ಯದ ಕುಲಗೋಡದಲ್ಲಿ ನಿರ್ಮಿಸಿದ ಟ್ಯಾಂಕ್ನ ಆಧಾರ ಕಂಬಗಳ ಕಾಂಕ್ರಿಟ್ ಬಿಚ್ಚಿ ಬಿರುಕು ಬಿಟ್ಟು ಒಳಗಿನ ಕಬ್ಬಣಗಳು ತೆರೆದುಕೊಂಡಿವೆ.
ಟ್ಯಾಂಕಿನ ಸುತ್ತಮುತ್ತಲು ಮನೆ ಇರುವುದರಿಂದ ಜನರು ಆತಂಕದಲ್ಲಿದ್ದಾರೆ. ಟ್ಯಾಂಕ್ ಅನ್ನು ತೆರವುಗೊಳಿಸಿ ಹೊಸ ಟ್ಯಾಂಕ್ ನಿರ್ಮಿಸಬೇಕು ಎಂಬುವುದು ಜನರ ಒತ್ತಾಯವಾಗಿದೆ.
‘ಟ್ಯಾಂಕಿನ ಶಿಥಿಲಾವಸ್ಥೆಯ ಬಗ್ಗೆ ಇಲಾಖೆಗೆ ಬರೆದಿದ್ದು, ಹೊಸ ಟ್ಯಾಂಕ್ ನಿರ್ಮಾಣದ ಮಂಜೂರಾತಿಗೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸ್ಥಳೀಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅರ್ಜುನ ಪೂಜೇರಿ ತಿಳಿಸಿದರು ಸಮಸ್ಯೆ ಉದ್ಭವಿಸುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬುವುದು ಎಂದು ಜನರ ಒತ್ತಾಯವಾಗಿದೆ.
* *
‘ಅವರಾದಿಯ ಕುಡಿಯುವ ನೀರಿನ ಟ್ಯಾಂಕ್ ಡೆಮಾಲಿಶ್ ಪಟ್ಟಿಯಲ್ಲಿ ಹಾಕಲಾಗಿದೆ. ತಾಲ್ಲೂಕಿನಲ್ಲಿ ಇಂಥ 14 ಟ್ಯಾಂಕ್ಗಳಿದ್ದು, ಹೊಸ ಯೋಜನೆಯ ಅನುದಾನದಲ್ಲಿ ಹೊಸ ಟ್ಯಾಂಕ್ ನಿರ್ಮಿಸಲಾಗುವುದು
ಐ.ಎಂ. ಧಪೇದಾರ
ತಾಲ್ಲೂಕು ಅಧಿಕಾರಿ, ಗ್ರಾಮೀಣ ನೀರು ಸರಬುರಾಜು ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.