ADVERTISEMENT

ಎಂ.ವಿ. ಆದರ್ಶ ಅಳವಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:35 IST
Last Updated 16 ಸೆಪ್ಟೆಂಬರ್ 2011, 5:35 IST

ಗೋಕಾಕ: ಶತಮಾನದ ಮಹಾನ್ ಶ್ರೇಷ್ಠ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ತಮ್ಮ ವಿಶೇಷ ಯೋಜನೆಗಳಿಂದ ಸದಾ ನಾಡಿನ ಜನರ ಸ್ಮರಣೆಯಲ್ಲಿದ್ದಾರೆಂದು ಲಕ್ಷ್ಮಿ ಶಿಕ್ಷಣ ಸಂಸ್ಥೆಯ ಡಿ.ಇಡಿ. ಮಹಾವಿದ್ಯಾಲ ಯದ ಪ್ರಾಚಾರ್ಯ ಪಿ.ಬಿ. ಪಂಗಣ್ಣವರ ಹೇಳಿದರು.

ಗುರುವಾರ ಸಂಸ್ಥೆಯ ಲಕ್ಷ್ಮಣರಾವ್ ಜಾರಕಿಹೊಳಿ ಪಾಲಿಟೆಕ್ನಿಕ್ ಮಹಾ ವಿದ್ಯಾಲಯದಲ್ಲಿಹಮ್ಮಿಕೊಳ್ಳಲಾಗಿದ್ದ `ಎಂಜಿನಿಯರ್ಸ್‌ ಡೇ~ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಜನೆ ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಶ್ರಮಿಸಿದ ಸರ್. ಎಂ. ವಿಶ್ವೇಶ್ವರಯ್ಯನವರ ಆದರ್ಶ ಗಳನ್ನು ಭಾವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿಭಾನ್ವಿತರಾಗಿ ದೇಶ ಸೇವೆಗೆ ಟೊಂಕ ಕಟ್ಟಿ ನಿಲ್ಲುವಂತೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಿ.ಬಿ. ಉಳ್ಳೇಗಡ್ಡಿ, ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್. ಹೊಂಗಲ ಮತ್ತಿತರರು ಪಾಲ್ಗೊಂಡಿದ್ದರು.ಸೌಮ್ಯ ಯಕ್ಸಂಬಿ ಸ್ವಾಗತಿಸಿದರು. ಆಕಾಶ ಮಹೇಂದ್ರಕರ ನಿರೂಪಿಸಿದರು. ಕೀರ್ತಿ ಕುಲಕರ್ಣಿ ವಂದಿಸಿದರು.

`ಎಂವಿ ಶ್ರೇಷ್ಠ ಎಂಜಿನಿಯರ್~
ಮೂಡಲಗಿ: `ಸರ್ ಎಂ. ವಿಶ್ವೇಶ್ವರಯ್ಯನವರು ಭಾರತ ಕಂಡ ಶ್ರೇಷ್ಠ ಎಂಜಿನಿಯರ್~ ಎಂದು ಎಂ.ಇ.ಎಸ್. ಡಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಸುರೇಶ ಲಂಕೆಪ್ಪನವರ ಹೇಳಿದರು.ಇಲ್ಲಿಯ ಶ್ರೀಪಾದಬೋಧ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾ ಲಯದ ಆತಿಥ್ಯದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ದವರು ಗುರುವಾರ ಏರ್ಪಡಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮೈಸೂರಿನ ಕನ್ನಂಬಾಡಿ ಅಣೆಕಟ್ಟು ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರ ಚಾಣಾಕ್ಷತೆಯು ಸದಾ ಸ್ಮರಣೀಯ  ಎಂದರು.

ಪ್ರಾಚಾರ್ಯ ಪ್ರೊ. ಆರ್.ಬಿ. ಕೊಕಟನೂರ ಮಾತನಾಡಿ, ನಾಡಿನ ಶ್ರೇಷ್ಠ ವ್ಯಕ್ತಿಗಳ ಬದುಕು ಸದಾ ಮಾದರಿಯಾಗಿವೆ ಎಂದರು.ವಿದ್ಯಾರ್ಥಿ ಪರಿಷತ್ ಮುಖಂಡ ಗಂಗಾಧರ ಬಿಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿವನಿಂಗ ಪೂಜಾರಿ ಸ್ವಾಗತಿಸಿದರು, ಶಿವು ಬೆಳ್ಳುಬ್ಬಿ ನಿರೂಪಿಸಿದರು, ಅಶೋಕ ಅಂಬಾಜಿ ಪರಿಚಯಿಸಿದರು, ಯಲ್ಲಪ್ಪ ಕುಬಚಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.