ADVERTISEMENT

ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಲಾಭಾಂಶ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:43 IST
Last Updated 3 ಏಪ್ರಿಲ್ 2013, 6:43 IST

ಬೆಳಗಾವಿ:  `ಪಿಯುಸಿ ವಿಜ್ಞಾನದ ಪಠ್ಯಕ್ರಮಗಳಿಗೆ ಪೂರೈಸುವ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಮೇಲಿನ ಮಾರಾಟದ ಲಾಭವನ್ನು ಹೆಚ್ಚಿಸಬೇಕು' ಎಂದು ಜಿಲ್ಲಾ ಪುಸ್ತಕ ಮಾರಾಟಗಾರರ ಸಂಘದ ಸದಸ್ಯ ಶೇಷ ಜವಳಕರ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮದ ನೂತನ ಪಠ್ಯಪುಸ್ತಕಗಳನ್ನು ಪೂರೈಸುತ್ತಿದೆ. ಈ ಪಠ್ಯಪುಸ್ತಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ, ಪುಸ್ತಕ ಮಾರಾಟದ ಮೇಲಿನ ಲಾಭ ಮಾತ್ರ ಬಹಳ ಕಡಿಮೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪುಸ್ತಕ ಮಾರಾಟದ ಮೇಲಿನ ಲಾಭವನ್ನು ಹೆಚ್ಚಿಸಬೇಕು ಎಂದರು.

ಈ ಮೊದಲು ರಾಜ್ಯ ಸರ್ಕಾರ ಪೂರೈಸುತ್ತಿದ್ದ ಪಿಯುಸಿ ವಿಜ್ಞಾನ ಪಠ್ಯಪುಸ್ತಕಗಳಿಂದ ಪುಸ್ತಕ ಮಾರಾಟಗಾರರಿಗೆ ಸುಮಾರು ಶೇ.17ರಷ್ಟು ಲಾಭ ಸಿಗುತ್ತಿತ್ತು. ಆದರೆ, ಕಳೆದ 2 ವರ್ಷಗಳಿಂದ ಪುಸ್ತಕ ಮಾರಾಟಗಾರರಿಗೆ ಕೇವಲ ಶೇ.5ರಷ್ಟು ಮಾತ್ರ ಲಾಭ ಸಿಗುತ್ತಿದೆ. ಇದರಲ್ಲಿ ಸಾರಿಗೆ, ಇತ್ಯಾದಿ ಖರ್ಚುಗಳನ್ನು ಹೊರತುಪಡಿಸಿ ತಮಗೆ ಶೇ.2ರಷ್ಟು ಮಾತ್ರ ಲಾಭ ಉಳಿಯುತ್ತಿದೆ. ಇದರಿಂದ ತೀವ್ರ ತೊಂದರೆಯಾಗಿದ್ದು, ವ್ಯಾಪಾರ ಮಾಡುವದು ಕಷ್ಟವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಕೆ ಉಪನಿದೇರ್ಶಕರಿಗೂ ಮನವಿ ಸಲ್ಲಿಸಲಾಗಿದೆ. 30 ದಿನಗಳೊಳಗಾಗಿ ತಮ್ಮ ಈ ಬೇಡಿಕೆ ಈಡೇರದಿದ್ದರೆ ಜಿಲ್ಲಾ ಪುಸ್ತಕ ಮಾರಾಟ ಸಂಘದಿಂದ ಹೋರಾಟ ನಡೆಸಲಾಗುವುದು. ಜಿಲ್ಲೆಯಾದ್ಯಂತ ಈ ಪಠ್ಯಪುಸ್ತಕಗಳ ಮಾರಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಕೆಲವು ಖಾಸಗಿ ಶಾಲೆಗಳು ಹಣದ ಆಮಿಷಕ್ಕೊಳಗಾಗಿ ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಮಾರಾಟ ಮಾಡುತ್ತಿವೆ. ಶಾಲೆ ಬಿಟ್ಟು ಹೊರಗಡೆ ಪಠ್ಯಪುಸ್ತಕಗಳನ್ನು ಖರೀದಿಸದಂತೆ ಪಾಲಕರ ಮೇಲೆ ಒತ್ತಡ ಹೇರ ಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.ಸಂಘದ ಅಧ್ಯಕ್ಷ ಕಾಶೀನಾಥ ಜಿಗಜಿನಿ, ಕಾರ್ಯದರ್ಶಿ ಮಿಲಿಂದ ಚೌಧರಿ, ಖಜಾಂಚಿ ದಿಲೀಪ ಸಾವಂತ, ಸುಭಾಷ ಇನಾಮದಾರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.