ಬೆಳಗಾವಿ: ‘ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಗರದ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಮುಲ್ಲಾ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ಹೇಳಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮೊಹಮ್ಮದ್ ಕೈಫ್ ಮುಲ್ಲಾ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ‘ಎಸ್ಎಸ್ಎಲ್ಸಿ ಹಾಗೂ ಪಿಯು ಫಲಿತಾಂಶ ಉತ್ತಮವಾಗಿ ಬಂದಾಗ ಸಂಭ್ರಮಿಸುವ ರೀತಿಯಲ್ಲಿಯೇ, ಫಲಿತಾಂಶ ನಿರಾಶಾದಾಯಕವಾಗಿ ಬಂದಾಗ ಅದನ್ನು ಒಪ್ಪಿಕೊಂಡು ಸುಧಾರಣೆಗೆ ಮುಂದಾಗಬೇಕು’ ಎಂದರು.
ಡಿಡಿಪಿಐ ಚಂದ್ರಪ್ಪ ಮಾತನಾಡಿದರು. ಮುಲ್ಲಾ ಪೋಷಕರನ್ನೂ ಸತ್ಕರಿಸಲಾಯಿತು. ಖಾದಿ ಕರವಸ್ತ್ರಗಳನ್ನು ಉಡುಗೊರೆಯಾಗಿ ನೀಡಿದರು.
ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಎಸ್ಪಿ ಸುಧೀರಕುಮಾರ ರೆಡ್ಡಿ, ಡಿಎಚ್ಒ ಅಪ್ಪಾಸಾಹೇಬ ನರಹಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಪಂಚಾಯತ್ರಾಜ್ ವಿಭಾಗದ ಅಧೀಕ್ಷಕ ಎಲ್.ಸಿ. ಗಾಣಿಗೇರ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಪುಂಡಲೀಕ ಅನವಾಲ ಪಾಲ್ಗೊಂಡಿದ್ದರು.
ಸೌಜನ್ಯಾಗೆ ಸನ್ಮಾನ: ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಚಿಕ್ಕೋಡಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮೂಡಲಗಿ ವಲಯದ ಹುಣಶ್ಯಾಳ ಪಿ.ಜಿ. ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸೌಜನ್ಯಾ ಶಂಕರ ನೇಸರಗಿ ಅವರನ್ನೂ ಸನ್ಮಾನಿಸಲಾಯಿತು.
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಿಖಿಲ್ ನಿಪ್ಪಾಣಿಕರ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಬಿಇಒ ಅಜಿತ್ ಸಿ. ಮನ್ನಿಕೇರಿ, ಶಾಲೆಯ ಮುಖ್ಯಶಿಕ್ಷಕ ಜಿ.ಎಲ್. ಕೋಳಿ, ಸಹಶಿಕ್ಷಕ ಕೆ.ಎಂ. ಅರಭಾವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.