ADVERTISEMENT

ಏಡ್ಸ್‌ ನಿಯಂತ್ರಣಕ್ಕೆ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:37 IST
Last Updated 2 ಡಿಸೆಂಬರ್ 2013, 8:37 IST

ಬೆಳಗಾವಿ: ವಿಶ್ವ ಏಡ್ಸ್‌ ದಿನಾಚರಣೆಯ ಅಂಗವಾಗಿ ಮಹೇಶ ಫೌಂಡೇಶನ್‌ ಕಾರ್ಯಕರ್ತರು ಎಚ್‌ಐವಿ ಏಡ್ಸ್‌ ರೋಗವನ್ನು ನಿಯಂತ್ರಿಸುವ ಕುರಿತು ನಗರದಲ್ಲಿ ಭಾನುವಾರ ಜನಜಾಗೃತಿ ಜಾಥಾ ನಡೆಸಿದರು. ಇಲ್ಲಿನ ಗೋವಾವೇಸ್‌ನ ಬಸವೇಶ್ವರ ವೃತ್ತ­ದಿಂದ ಅನಗೋಳದವರೆಗೆ ಜಾಥಾ ನಡೆಸಿ ಅರಿವು ಮೂಡಿಸಿದರು.

ಬಳಿಕ ಬಿಗ್‌ ಬಜಾರ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಗ್‌ಬಜಾರ್‌ನ ಮುಖ್ಯ ವ್ಯವಸ್ಥಾಪಕ ಕಿರಣ ಕುಮಾರ ಮಾತ­ನಾಡಿ, ‘ಎಚ್‌ಐವಿ ಪೀಡಿತರನ್ನು ಸಮಾಜ ಕೀಳರಿಮೆಯಿಂದ ಕಾಣುವು­ದನ್ನು ನಿಲ್ಲಿಸಬೇಕು. ಅವರನ್ನು ಎಲ್ಲರಂತೆ ಸಮಾನವಾಗಿ ಕಾಣುವ ಮೂಲಕ ಆತ್ಮಸ್ಥೈರ್ಯ ತುಂಬಬೇಕು. ಈ ಮೂಲಕ ಎಚ್‌ಐವಿ ಪೀಡಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು’ ಎಂದರು.

‘ಮಹೇಶ ಫೌಂಡೇಶನ್‌ ಎಚ್‌ಐವಿ ಪೀಡಿತ ಮಕ್ಕಳಿಗೆ ಆಶ್ರಯ ನೀಡಿ, ಜನ­ಸಾಮಾನ್ಯರಿಗೆ ಎಚ್‌ಐವಿಯನ್ನು ನಿಯಂತ್ರಿ­­ಸುವ ಕುರಿತು ಅರಿವು ಮೂಡಿ­ಸುತ್ತಿದೆ. ಈ ಮೂಲಕ ಸಮಾಜದಲ್ಲಿ ಬದ­ಲಾವಣೆ ತರಲು ಶ್ರಮಿಸುತ್ತಿದೆ. ಎಚ್‌ಐವಿ ಪೀಡಿತರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಹೇಶ ಫೌಂಡೇಶನ್‌ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಮಹೇಶ ಫೌಂಡೇಶನ್‌ ಸ್ವಯಂ ಸೇವಕರು, ಬಿಗ್‌ ಬಜಾರ್‌ ಸಿಬ್ಬಂದಿ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಏಡ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿ’
ಚಿಕ್ಕೋಡಿ: ‘ಅತಿ ಹೆಚ್ಚು ಏಡ್ಸ್‌ ಪೀಡಿತರ ಪಟ್ಟಿಯಲ್ಲಿ ಭಾರತ ಜಗತ್ತಿನಲ್ಲೇ ಎರ­ಡನೇ ಸ್ಥಾನದಲ್ಲಿ ಇರುವುದು ಆತಂಕದ ಸಂಗತಿಯಾಗಿದೆ. ಏಡ್ಸ್ ನಿಯಂತ್ರಣ ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಎಚ್‌ಐವಿ ಮುಕ್ತ ಸಮಾಜ ನಿರ್ಮಾಣದಲ್ಲಿ ಸಮುದಾಯ ಪಾತ್ರವೂ ಮಹತ್ತರವಾಗಿದೆ’ ಎಂದು ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ವಿಭಾ­ಗದ ಸಹ ನಿರ್ದೇಶಕಿ ಡಾ.ಲೀಲಾ ಸಂಪಿಗೆ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಆಶ್ರಯ­ದಲ್ಲಿ ವಿಶ್ವ ಏಡ್ಸ್‌ ದಿನಾಚರಣೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕು ಕಟ್ಟಿಕೊಂಡು ಸದೃಢ ದೇಶ ರೂಪಿ­ಸುವ ಯುವಕರೇ ಹೆಚ್ಚಾಗಿ ಏಡ್ಸ್‌ಗೆ ಬಲಿಯಾಗುತ್ತಿರುವುದು ಕಳವ­ಳ­ಕರ ಸಂಗತಿ. ‘ಎಚ್‌ಐವಿ/ಏಡ್ಸ್‌ ಸೋಂಕನ್ನು, ಕಳಂಕ ಮತ್ತು ತಾರತ­ಮ್ಯವನ್ನು ಹಾಗೂ ಎಚ್‌ಐವಿ/ಏಡ್ಸ್‌ ಸಂಬಂಧಿತ ಸಾವನ್ನು ಸೊನ್ನೆಗೆ ತನ್ನಿ’ ಎಂಬ ಘೋಷ ವಾಕ್ಯವನ್ನು ಸಾಕಾರ­ಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯ ನರೇಂದ್ರ ನೇರ್ಲೆಕ ಏಡ್ಸ್ ಮುಕ್ತ ಸಮಾಜ ಕಟ್ಟಲು ಪ್ರತಿ­ಯೊಬ್ಬರು ಪ್ರಯತ್ನಿಸಬೇಕಾಗಿದೆ’ ಎಂದರು.

ಇದಕ್ಕೂ ಮುನ್ನ ಪಟ್ಟಣದ ಆರ್‌.ಡಿ. ಹೈಸ್ಕೂಲ್‌ ಪ್ರಾಂಗಣದಿಂದ ಹೊರಟ ಜಾಗೃತಿ ಜಾಥಾಗೆ ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ ಚಾಲನೆ ನೀಡಿದರು. ಡಿಎಚ್‌ಒ ಡಾ.ಅಪ್ಪಾಸಾಬ ನರಹಟ್ಟಿ, ಉಪವಿಭಾಗಾಧಿಕಾರಿ ಡಾ. ರುದ್ರೇಶ ಘಾಳಿ, ತಹಶೀಲ್ದಾರ್‌ ರಾಜಶೇಖರ ಡಂಬಳ, ಹೆಚ್ಚುವರಿ ಜಿಲ್ಲಾ ಆರೋಗ್ಯಾ­ಧಿಕಾರಿ ಡಾ. ವಿ.ಬಿ. ಕುಲಕರ್ಣಿ, ಡಾ. ಎಂ.ಆರ್. ಗಿಂಡೆ, ಪುರಸಭೆ ಸದಸ್ಯ ನಾಗೇಶ ಕಿವಡ, ರಾಮಾ ಮಾನೆ, ಟಿಎಚ್ಒ ಡಾ. ಐ.ಎಸ್. ಹೆಬ್ಬಳ್ಳಿ, ಪ್ರಾಚಾರ್ಯ ಬಿ.ಎ. ಪೂಜಾರಿ, ಆನಂದ ಅರ­ವಾರೆ, ಎಂ.ಬಿ. ಬೋರನ್ನವರ, ಡಾ. ಲಕ್ಷ್ಮೀಕಾಂತ ಕಡ್ಲೆಪ್ಪಗೋಳ, ಡಾ. ಚಾಂದನಿ ಉಪಸ್ಥಿತರಿದ್ದರು.

ಡಾ. ಎಸ್.ಎಸ್. ಗಡೇದ ಸ್ವಾಗತಿ­ಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ವೈ. ನಾಯ್ಕರ ನಿರೂಪಿಸಿದರು. ಡಾ. ವಿವೇಕ ಹೊನ್ನಳ್ಳಿ ವಂದಿಸಿದರು.

ಮೂಡಲಗಿಯಲ್ಲಿ ಜಾಥಾ
ಮೂಡಲಗಿ: ‘
ಏಡ್ಸ ಬಗ್ಗೆ ತಿಳಿದು­ಕೊಂಡು ಅಂಥ ಭಯಾನಕ ರೋಗಕ್ಕೆ ಆಹ್ವಾನ ನೀಡದೆ ಉತ್ತಮ ಹವ್ಯಾಸ­ಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಪುರಸಭೆಯ ಅಧ್ಯಕ್ಷ ರಾಮಣ್ಣ ಹಂದಿಗುಂದ ಹೇಳಿದರು.

ಇಲ್ಲಿಯ ಆರೋಗ್ಯ ಸಮುದಾಯ ಕೇಂದ್ರ, ಪುರಸಭೆ, ಆಶಾ ಕಾರ್ಯ­ಕರ್ತರು, ಸಿ.ಎನ್. ಮುಗಳಖೋಡ ನರ್ಸಿಂಗ್ ಕಾಲೇಜುಗಳ ಸಹಯೋಗ­ದಲ್ಲಿ ಭಾನು­ವಾರ  ವಿಶ್ವ ಏಡ್ಸ ದಿನಾ­ಚರಣೆ ಅಂಗ­ವಾಗಿ ಏರ್ಪಡಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾ­ಧಿಕಾರಿ ಬಿ.ಆರ್. ಪಾತ್ರೋಟ  , ಎಚ್‌.­ಐ.ವಿ. ಸೋಂಕು ತಗುಲದಂತೆ ಜಾಗೃತಿ ವಹಿಸಬೇಕು ಎಂದರು.

ಪುರ­ಸಭೆ ಸದಸ್ಯ­ರಾದ ಡಾ. ಎಸ್.ಎಸ್. ಪಾಟೀಲ, ಈರಪ್ಪ ಬನ್ನೂರ, ವೈದ್ಯಾ­ಧಿಕಾರಿ ಡಾ. ಭಾರತಿ ಕೋಣಿ, ಡಾ. ಎಸ್.ಎಸ್. ಖನಾದಾಳೆ, ಬಿ.ಬಿ. ಬೆಳಗಲಿ, ಚಿದಾ­ನಂದ ಮುಗಳಖೋಡ, ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.