ADVERTISEMENT

ಕಬ್ಬು: ಹೊಸ ತಳಿಗಳ ಸಂಶೋಧನೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 8:28 IST
Last Updated 29 ಡಿಸೆಂಬರ್ 2017, 8:28 IST
ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಿರ್ಮಿಸಿರುವ ಶಿಕ್ಷಾರ್ಥಿ ಹಾಸ್ಟೆಲ್‌ ಅನ್ನು ಸಕ್ಕರೆ ಸಚಿವೆ ಎಂ.ಸಿ. ಮೋಹನಕುಮಾರಿ ಗುರುವಾರ ಉದ್ಘಾಟಿಸಿದರು
ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಿರ್ಮಿಸಿರುವ ಶಿಕ್ಷಾರ್ಥಿ ಹಾಸ್ಟೆಲ್‌ ಅನ್ನು ಸಕ್ಕರೆ ಸಚಿವೆ ಎಂ.ಸಿ. ಮೋಹನಕುಮಾರಿ ಗುರುವಾರ ಉದ್ಘಾಟಿಸಿದರು   

ಬೆಳಗಾವಿ: ಇಲ್ಲಿನ ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಕಬ್ಬಿನ ಹೊಸ ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಸಚಿವೆ ಎಂ.ಸಿ. ಮೋಹನಕುಮಾರಿ ತಿಳಿಸಿದರು.

ಸಂಸ್ಥೆಯಲ್ಲಿ ನಿರ್ಮಿಸಿರುವ ಶಿಕ್ಷಣಾರ್ಥಿಗಳ ಹಾಸ್ಟೆಲ್‌ ಹಾಗೂ ಸ್ಥಾಪಿಸಿರುವ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಗುರುವಾರ ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ದೇಶದಲ್ಲಿರುವ ಮೂರು ಸಂಸ್ಥೆಗಳ ಪೈಕಿ ಒಂದಾಗಿರುವ ಇಲ್ಲಿ ಕಬ್ಬು, ಸಕ್ಕರೆ ಹಾಗೂ ಇದಕ್ಕೆ ಸಂಬಂಧಿಸಿದ ಇತರ ಉದ್ದಿಮೆಗಳ ಸಂಶೋಧನೆ, ಶಿಕ್ಷಣ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರಯೋಗಾಲಯ ವಿಸ್ತರಣೆಗೂ ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ADVERTISEMENT

ತರಬೇತಿ ಪಡೆಯುವವರಿಗೆ ಅನುಕೂಲ: ‘ಕಬ್ಬಿನ ಉತ್ಪಾದನೆ ಹೆಚ್ಚಿಸುವ ಅಂಶಗಳಲ್ಲಿ ಕಬ್ಬಿನ ಬೀಜವು ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ರೈತರಿಗೆ ನೆರವು ನೀಡಲು ಅಂಗಾಂಶ ಕೃಷಿ ಪ್ರಯೋಗಾಲಯ ಸ್ಥಾಪಿಸಲಾಗಿದೆ. 2.50 ಲಕ್ಷ ಅಂಗಾಂಶ ಕೃಷಿ ಸಸಿಗಳನ್ನು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗಿದೆ.

ಕಬ್ಬಿನ ತುದಿಯ ಭಾಗದಿಂದ ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಬೆಳೆಸಿದ ಸಸಿಗಳನ್ನು ಜಮೀನುಗಳಲ್ಲಿ ಹೇಗೆ ನೆಡಬೇಕು ಎನ್ನುವ ಪ್ರಾತ್ಯಕ್ಷಿಕೆಯನ್ನು ಸಂಸ್ಥೆ ಆವರಣದಲ್ಲಿ ಮಾಡಲಾಗಿದೆ. ಈ ಸಸಿಗಳ ಬೇಡಿಕೆ ಗಮನಿಸಿ ಪ್ರಯೋಗಾಲಯದ ಸಸಿಗಳ ಉತ್ಪಾದನಾ ಸಾಮರ್ಥ್ಯವನ್ನು ಪ್ರತಿ ವರ್ಷಕ್ಕೆ1.50 ಲಕ್ಷದಿಂದ 3 ಲಕ್ಷದವರೆಗೆ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ತರಬೇತಿ ಪಡೆಯುವುದಕ್ಕೆ ಬರುವವರ ಅನುಕೂಲಕ್ಕಾಗಿ ವಸತಿನಿಲಯ ನಿರ್ಮಿಸಲಾಗಿದೆ. 100 ಮಂದಿ ವಾಸ್ತವ್ಯಕ್ಕೆ ಇಲ್ಲಿ ವ್ಯವಸ್ಥೆ ಇದೆ. ರೈತರಿಗೆ ಹಾಗೂ ಅಲ್ಪಾವಧಿ ಕೋರ್ಸ್‌ ಕಲಿಯುವವರು ಉಳಿದುಕೊಳ್ಳಲು ಇದರಿಂದ ಅನುಕೂಲವಾಗಿದೆ’ ಎಂದರು.

‘ಕಬ್ಬಿನಲ್ಲಿ ಸಾವಯವ ಕೃಷಿ ಅಳವಡಿಸಲು ಅವಶ್ಯವಿರುವ ಜೈವಿಕ ಪೀಡೆ ಮತ್ತು ಗೊಬ್ಬರಗಳನ್ನು ಉತ್ಪಾದಿಸಿ ರೈತರಿಗೆ ವಿತರಣೆ ಮಾಡುವುದಕ್ಕಾಗಿ ಘಟಕ ಪ್ರಾರಂಭಿಸಲಾಗುತ್ತಿದೆ. ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಪ್ರಯೋಗಾಲಯ ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮದ್ಯಸಾರ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ತಾಂತ್ರಿಕ ಸಾಮರ್ಥ್ಯ ಹೆಚ್ಚಿಸಲು ಮದ್ಯಸಾರ ವಿಭಾಗದಿಂದ ಎರಡು ಅಲ್ಪಾವಧಿ ಪ್ರಮಾಣಪತ್ರಗಳ ಕೋರ್ಸ್‌ಗಳನ್ನು (6 ತಿಂಗಳ ಅವಧಿ) ಪ್ರಾರಂಭಿಸಲಾಗಿದೆ. 41 ಅಭ್ಯರ್ಥಿಗಳು ಪ್ರಮಾಣಪತ್ರಗಳ ಪಡೆದುಕೊಂಡಿದ್ದಾರೆ’ ಎಂದು ವಿವರಿಸಿದರು.

ಒಡಂಬಡಿಕೆ: ‘ಕಬ್ಬಿನ ತಳಿಗಳನ್ನು ಸಂಸ್ಕರಣೆ ಮಾಡಲು ಹೆಸರುವಾಸಿಯಾದ ಕೊಯಮತ್ತೂರಿನ ಕಬ್ಬು ಸಂಸ್ಕರಣಾ ಸಂಸ್ಥೆಯೊಂದಿಗೆ ನಾಲ್ಕು ವರ್ಷದವರೆಗೆ ಸಂಶೋಧನೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಅಲ್ಲಿಂದ ಹೊಸ ತಳಿಗಳನ್ನು ತಂದು ಅವುಗಳ ಗುಣಧರ್ಮವನ್ನು ಪರೀಕ್ಷಿಸಲಾಗುತ್ತಿದೆ. ಈ ಚಟುವಟಿಕೆಯಿಂದ ಸಿಒ 2012–88, ಸಿಒ 2012–91, ಸಿಒಎಂ 10001, ಸಿಒ ವಿಎಸ್‌ಐ 03102 ಹಾಗೂ ಸಿಒ 14010 ತಳಿಗಳು ಉತ್ತಮವೆಂದು ಕಂಡುಬಂದಿವೆ.

ಈ ತಳಿಗಳ ಪ್ರಾತ್ಯಕ್ಷಿಕೆಯನ್ನು ಸಂಸ್ಥೆ ಆವರಣದಲ್ಲಿ ನೋಡಬಹುದು. ಬರ ತಡೆಯುವ 35 ಕಬ್ಬಿನ ಹೊಸ ತಳಿಗಳನ್ನು ಸಂಸ್ಥೆಯ ಯರಗಟ್ಟಿ ಕೇಂದ್ರದಲ್ಲಿ ಪರೀಕ್ಷಿಸಲಾಗುತ್ತಿದೆ. ಎಕರೆಗೆ 40 ಟನ್‌ ಇಳುವರಿ ನೀಡುವ, 8 ತಿಂಗಳಲ್ಲಿ ಕಟಾವಿಗೆ ಬರುವ ಹಾಗೂ ಹೂವಾಗದಿರುವ ತಳಿ ಸಂಶೋಧಿಸಲಾಗಿದೆ’ ಎಂದು ನಿರ್ದೇಶಕ ಆರ್‌.ಬಿ. ಖಂಡಗಾವೆ ತಿಳಿಸಿದರು.

‘ಧಾರವಾಡದ ಕೃಷಿ ವಿಶ್ವವಿದ್ಯಾಲಯದೊಂದಿಗೆ ಸಹ–ಸಂಶೋಧನಾ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಪಿಎಚ್‌.ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ತೀರ್ಮಾನಿಸಲಾಗಿದೆ’ ಎಂದರು. ಉಪಾಧ್ಯಕ್ಷ ಜಗದೀಶ ಗುಡಗುಂಟಿ ಇದ್ದರು.

ಅಂಕಿ–ಅಂಶ

73 2014ರಿಂದ ಝಾಡಶಹಾಪುರ ಕೇಂದ್ರದಲ್ಲಿ ನಾಟಿ ಮಾಡಿ ಪ್ರಯೋಗಿಸಿದ ಹೊಸ ತಳಿಗಳು

5 ಉತ್ತಮವೆಂದು ಕಂಡುಬಂದಿರುವ ತಳಿಗಳು

35 ಬರ ತಡೆಯುವ ನಿಟ್ಟಿನಲ್ಲಿ ಪರೀಕ್ಷಿಸಲಾಗುತ್ತಿರುವ ತಳಿಗಳು

41 ಅಲ್ಪಾವಧಿ ಕೋರ್ಸ್‌ ಪ್ರಮಾಣಪತ್ರ ಪಡೆದುಕೊಂಡವರು

2.5 ಲಕ್ಷ ಸಂಸ್ಥೆಯಿಂದ ವಿತರಿಸಿರುವ ಅಂಗಾಂಶ ಕೃಷಿ ಸಸಿಗಳು

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇವೆ. ಪತಿ ಎಚ್‌.ಎಸ್‌. ಮಹದೇವಪ್ರಸಾದ್‌ ಅವರು ಚಾಲನೆ ನೀಡಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಜನರ ವಿಶ್ವಾಸ ಗಳಿಸಿದ್ದೇನೆ. ಹೀಗಾಗಿ, ಮತ್ತೊಮ್ಮೆ ಆಶೀರ್ವದಿಸುತ್ತಾರೆ ಎನ್ನುವ ವಿಶ್ವಾಸವಿದೆ’  ಎಂದು ಮೋಹನಕುಮಾರಿ ಹೇಳಿದರು.

ವರದಿ ಬಂದ ನಂತರ ಕ್ರಮ

‘ಜಿಲ್ಲೆಯ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಬಾಕಿ ಉಳಿಸಿಕೊಂಡಿರುವ ಕುರಿತು ದೂರು ಬಂದಿತ್ತು. ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಕ್ಕರೆ ಆಯುಕ್ತ ಡಾ.ಅಜಯ್ ನಾಗಭೂಷಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.