ADVERTISEMENT

ಕಾಂಗ್ರೆಸ್‌ ಸಾಧನೆಯನ್ನು ಜನರಿಗೆ ತಿಳಿಸಿ: ಪಾಟೀಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 8:28 IST
Last Updated 19 ಮಾರ್ಚ್ 2014, 8:28 IST

ಸಂಕೇಶ್ವರ: ಕಳೆದ 5 ವರ್ಷಗಳಲ್ಲಿ ಕೇಂದ್ರದ ಕಾಂಗ್ರೆಸ್‌ ಮುಂದಾಳತ್ವದ ಯು.ಪಿ.ಎ  ಸರ್ಕಾರ ಅಪಾರ  ಕೆಲಸಗಳನ್ನು ಮಾಡಿದ್ದು ಇದರ ವಿವರವನ್ನು ಪಕ್ಷದ ಕಾರ್ಯಕರ್ತರು ಜನರು ಮುಂದಿಡಬೇಕು ಎಂದು ಮಾಜಿ ಸಚಿವ ಎ.ಬಿ.ಪಾಟೀಲ ಕರೆ ನೀಡಿದರು.

ಸಂಕೇಶ್ವರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹುಕ್ಕೇರಿ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜನರ ಕೈಗೆ ಉದ್ಯೋಗ, ಆಹಾರ ಭದ್ರತಾ ಕಾಯಿದೆಯ ಮೂಲಕ ಪ್ರತಿಯೊಬ್ಬರಿಗೂ ಆಹಾರ ಧಾನ್ಯ, ವಿವಿಧ ಸಾಮಾಜಿಕ ಸೌಲಭ್ಯಗಳು, ಗ್ರಾಮೀಣ ಅಭಿವೃದ್ದಿ, ಆಧುನಿಕ ಶಿಕ್ಷಣ ವ್ಯವಸ್ಥೆ ಇವೇ ಮುಂತಾದವುಗಳನ್ನು ಕೇಂದ್ರದ ಯು.ಪಿ.ಎ ಸರ್ಕಾರ ನೀಡಿದೆ.ಅದಲ್ಲದೆ ರಾಜ್ಯದ ಕಾಂಗ್ರೆಸ್‌ ಪಕ್ಷದ ಸರ್ಕಾರವು ಸಹಿತ ಅನ್ನ ಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ  ಕರ್ನಾಟಕವನ್ನು ಮಾಡಲು ಯತ್ನಿಸು ತ್ತಿದೆ. ಇಂಥ ಜನಪರ ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ದಿಗೆ ಹೊಸ ಶಕೆ ಬರೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನಾವೆಲ್ಲಾ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.

ಮೋದಿಯ ಪ್ರಚಾರದ ಹಿಂದೆ ಉದ್ಯಮಿಗಳ ದೊಡ್ಡ ಲಾಬಿ ಇದೆ. ಇದೇ ಗುಂಪು ಮಾಧ್ಯಮಗಳಲ್ಲಿ ಮೋದಿಯ ಪರ  ಪ್ರಚಾರ ಮಾಡುತ್ತಿದೆ. ಆದರೆ ಇಡೀ ದೇಶದಲ್ಲಿ ಹೆಚ್ಚು ಅನಕ್ಷರಸ್ಥರಿರುವ ರಾಜ್ಯವೆಂದರೆ ಗುಜರಾತ ಮಾತ್ರ. ಅಲ್ಲಿ ಇವತ್ತಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭ್ರೂಣಹತ್ಯೆ ನಡೆಯುತ್ತಿದೆ. ಇದೆಲ್ಲಾ ಮೋದಿ ಅವರಿಗೆ ಕಾಣಿಸುತ್ತಿಲ್ಲಾ ಎಂದು ಅವರು ಟೀಕಿಸಿ, ಬಿ.ಜೆ.ಪಿ ಸರ್ಕಾರವಿ ದ್ದಾಗ ಆ ಪಕ್ಷದ ಶಾಸಕರೇ ಲೋಕೋ ಪಯೋಗಿ ಇಲಾಖೆಯ ಕಚೆೇರಿಗಳಿಗೆ ಹೋಗಿ ಬಿಲ್ಲು ಮಾಡಿಸುತಿದ್ದರು. ಸಂಕೇಶ್ವರ ಪುರಸಭೆ ಮತ್ತು ಹುಕ್ಕೇರಿ ಪಟ್ಟಣ ಪಂಚಾಯಿತಿಗಳಲ್ಲಿ ವ್ಯಯವಾದ ವೆಚ್ಚಕ್ಕೂ ಹಾಗೂ ನೈಜ ಪ್ರಗತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದರ ಹಿಂದೆ ಜನಪ್ರತಿನಿಧಿಗಳು ಯಾವ ರೀತಿಯಾಗಿ ಕೆಲಸ ಮಾಡುತ್ತಾರೆ ಎಂಬುದು ಜನರು ಅರಿಯಲಿ ಎಂದರು.

ಇದೇ ಸಂದರ್ಭದಲ್ಲಿ ಬಿ.ಜೆ.ಪಿ ಧುರೀಣರಾದ ಭೀಮಗೌಡ ಪಾಟೀಲ, ಶ್ರೀಕಾಂತ ಭೂಷಿ, ವಿಶ್ವನಾಥ ಲಿಂಗದಳ್ಳಿ ಹಾಗೂ  ವಿವಿಧ  ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ಸೇರಿದರು.ಸಭೆಯಲ್ಲಿ ಕಾಂಗ್ರೆಸ್‌ ಧುರೀಣರಾದ ಎಸ್‌.ಎಸ್‌.ಶಿರಕೋಳಿ, ಜಯಪ್ರಕಾಶ ನಲವಡೆ,ಗಂಗಾಧರ ಮುಡಸಿ, ಪ್ರಕಾಶ ದೇಶಪಾಂಡೆ, ರವಿ ಕರಾಳೆ, ಎಸ್‌.ಎಸ್‌.ಹಾಲದೇವರಮಠ, ಅಶ್ವಿನಿ ಬಾಳನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.