ADVERTISEMENT

ಕೆಸರು ಗದ್ದೆಯಾದ ತರಕಾರಿ ಮಾರುಕಟ್ಟೆ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 7:02 IST
Last Updated 22 ಜುಲೈ 2013, 7:02 IST

ಘಟಪ್ರಭಾ (ಗೋಕಾಕ):  ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದಾಗಿ ಇಲ್ಲಿಯ ತರಕಾರಿ ಮಾರುಕಟ್ಟೆ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ಮಳೆಯಿಂದಾಗಿ ಮಲ್ಲಾಪೂರ ಪಿ.ಜಿ. ಗ್ರಾ.ಪಂ. ಅಧೀನದಲ್ಲಿರುವ ತರಕಾರಿ ಮಾರುಕಟ್ಟೆ ನೀರು ಮತ್ತು ಕೆಸರಿನಿಂದ ತುಂಬಿಕೊಂಡು ಜನ ನಡೆದಾಡದ ದುಃಸ್ಥಿತಿ ನಿರ್ಮಾಣವಾಗಿದೆ.

ತರಕಾರಿ ವರ್ತಕರು ಹಾಗೂ ರೈತರು ಅಂಥ ಕೊಳಚೆಯ ಮೂಲಕ ಹಾಯ್ದು ಹೋಗಲು ಪರದಾಡುತ್ತಿದ್ದಾರೆ. ಪಂಚಾಯಿತಿ ಇದನ್ನು ಶುಚಿಗೊಳಿಸಲು ಹಿಂದೇಟು ಹಾಕಿದರೆ ಮಾರಕ ರೋಗಗಳು ಹರಡುವ ಭೀತಿ ಎದುರಾಗಿದೆ.

ದಿನ ನಿತ್ಯ ನೂರಾರು ಕೃಷಿಕರು ತಮ್ಮ ಜಮೀನಗಳಲ್ಲಿ ಬೆಳೆದ ತರಕಾರಿಯನ್ನು ಮಾರಾಟಕ್ಕೆ ಇಲ್ಲಿ ತರುತ್ತಾರೆ.

ರೈತರು ಬೆಳೆದ ತರಕಾರಿಯನ್ನು ಖರೀದಿಸಲು ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಠೋಕ ವರ್ತಕರು ತಮ್ಮ ವಾಹನ ಸಮೇತ ಇಲ್ಲಿಗೆ ಬಂದು ವಹಿವಾಟು ನಡೆಸುತ್ತಾರೆ. ಆದರೆ ಇವರ ವ್ಯವಹಾರದ ಮಧ್ಯೆ ಬೇಡವಾದ ವಸ್ತುಗಳನ್ನು ಅಲ್ಲಲ್ಲಿಯೇ ಬಿಸಾಡಿ ಹೋಗುತ್ತಾರೆ. ಹೀಗಾಗಿ, ಪಂಚಾಯಿತಿ ಸಿಬ್ಬಂದಿ ಅಂಥವರಿಂದ ಶುಚಿತ್ವ ಶುಲ್ಕವನ್ನು ವಸೂಲಿ ಮಾಡಬೇಕು ಮತ್ತು ತರಕಾರಿ ಪೇಟೆಯನ್ನು ಸ್ವಚ್ಛವಾಗಿ ಇಡಬೇಕು.

ಇದೇ ತರಕಾರಿ ಮಾರುಕಟ್ಟೆಯಿಂದ ಗ್ರಾಮ ಪಂಚಾಯಿತಿಗೆ ಲಕ್ಷಕ್ಕೂ ಮಿಕ್ಕಿ ಆದಾಯ ದೊರಕುತ್ತದೆ. ಹೀಗಿರುವಾಗ ಪಂಚಾಯ್ತಿ ಮಾರುಕಟ್ಟೆ ಪ್ರದೇಶದ ಶುಚಿತ್ವದ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಿದೆ.

ಹಲವಾರು ಅಂಗಡಿಗಳು ಮಾರುಕಟ್ಟೆಯ ಒಳಾಂಗಣದಲ್ಲಿ ಇದ್ದು ಕೊಳಚೆಯನ್ನು ದಾಟಿ ಅವರ ಅಂಗಡಿಗಳತ್ತ ನೋಡುವವರೇ ಇಲ್ಲದೇ ಅವರು ನಷ್ಟ ಅನುಭವಿಸುವಂತಾಗಿದೆ. 

ಈ ಹಿನೆಲೆಯಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು  ಮಾರುಕಟ್ಟೆಯಲ್ಲಿ ತುಂಬಿಕೊಂಡಿರುವ ಕೆಸರನ್ನು ತೆಗೆಸಿ ರೈತರಿಗೆ ಹಾಗೂ ವರ್ತಕರಿಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.