ADVERTISEMENT

‘ಗಡಿ ವಿವಾದ ಬಗೆಹರಿಯುವವರೆಗೆ ಮಹದಾಯಿಗೆ ಒಪ್ಪಿಗೆ ನೀಡಬೇಡಿ’

ಎಂಇಎಸ್‌ ಬೆಂಬಲಿಗ ಸಂಘಟನೆ ಮರಾಠಿ ಯುವ ಮಂಚ್‌ ಪತ್ರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 5:43 IST
Last Updated 28 ಡಿಸೆಂಬರ್ 2017, 5:43 IST

ಬೆಳಗಾವಿ: ಗಡಿ ವಿವಾದ ಬಗೆಹರಿಯುವವರೆಗೆ ಮಹದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಇಲ್ಲಿನ ಮರಾಠಿ ಯುವ ಮಂಚ್‌ ಸಂಘಟನೆಯು ಪತ್ರ ಬರೆದು ಒತ್ತಾಯಿಸಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಬೆಂಬಲಿಗ ಸಂಘಟನೆಯಾಗಿರುವ ಮರಾಠಿ ಯುವ ಮಂಚ್‌ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರಿಗೆ ಅನ್ಯಾಯ ಮಾಡುತ್ತಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಮೂಗು ಹಿಡಿದು, ಬಾಯಿ ತೆಗೆಯಿಸಬೇಕಾಗಿದೆ. ಅದಕ್ಕೆ ಪಾಠ ಕಲಿಸಬೇಕು’ ಎಂದು ಸಂಘಟನೆ ಕೋರಿಕೊಂಡಿದೆ.ಮಹಾಜನ ಆಯೋಗದ ವರದಿಯ ಪ್ರಕಾರ ಕಳಸಾ ಬಂಡೂರಿ ನಾಲಾ ಪ್ರದೇಶವು ಮಹಾರಾಷ್ಟ್ರಕ್ಕೆ ಸೇರುತ್ತದೆ. ಕರ್ನಾಟಕ ಸರ್ಕಾರ ಈ ಪ್ರದೇಶದಲ್ಲಿ ನಾಲೆ ಅಗೆದು ಅಲ್ಲಿನ ದೇವಸ್ಥಾನಕ್ಕೆ ಧಕ್ಕೆ ಮಾಡಿದೆ ಎಂದು ಸಂಘಟನೆಯು ಆರೋಪಿಸಿದೆ.

ADVERTISEMENT

ಒಂದು ವೇಳೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದರೆ, ಮೊದಲು ಗಡಿ ವಿವಾದ ಬಗೆಹರಿಸಿ ಎಂದು ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.