ಹುಕ್ಕೇರಿ: ತಾಲ್ಲೂಕಿನ ಕುಂದರನಾಡಿನ ಪಾಶ್ಚಾಪುರ ಹಾಗೂ ಕುಂದರಗಿ ಗ್ರಾಮದ ಮಹಾಲಕ್ಷ್ಮೀ ದೇವಿಯ ಜಾತ್ರೆ ಹಾಗೂ ರಥೋತ್ಸವವು ಶುಕ್ರವಾರದಿಂದ ಪ್ರಾರಂಭಗೊಂಡಿದ್ದು, ಬರುವ ಮಂಗಳವಾರದವರೆಗೆ ಜರುಗಲಿದೆ.
ಪಾಶ್ಚಾಪುರ ಗ್ರಾಮದಆಲೂರವ್ವ ದೇವಿಗೆ (ಮಹಾಲಕ್ಷ್ಮೀ) ವಾದ್ಯ ಮೇಳದೊಂದಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಉಡಿ ತುಂಬುವ ಕಾರ್ಯ ಜರುಗಿತು.
ಶನಿವಾರ ಗ್ರಾಮದ ಮತ್ತು ಇತರ ಗ್ರಾಮಗಳ ಭಕ್ತರು ದೇವಿಗೆ ಉಡಿ ತುಂಬುವರು. ಮಧ್ಯಾಹ್ನ 2 ಗಂಟೆಯಿಂದ ದೇವಿಯ ಹೊನ್ನಾಟ ನಡೆಯುವುದು.
ರಾತ್ರಿ 10.30 ಗಂಟೆಗೆ ಪಾಶ್ಚಾಪೂರದ ಮೇಲಿನ ಪೇಟೆಯ ಸಿ.ಆರ್. ನಿಪನಾಳ ನಾಟ್ಯ ಸಂಘದವರಿಂದ `ಧರ್ಮ ತುಂಬಿದ ಮನೆ~ ನಾಟಕವು ಬಸ್ ನಿಲ್ದಾಣದ ಹತ್ತಿರ ನಡೆಯಲಿದೆ.
ಅಂದು ರಾತ್ರಿ ಕೆಳಗಿನ ಪೇಟೆಯ ಶ್ರೆ ಆಲೂರವ್ವ ನಾಟ್ಯ ಸಂಘದವರಿಂದ ರಾತ್ರಿ 10.30 ಗಂಟೆಗೆ `ರಾಧಾನ ಆಟ~ ನಾಟಕ ಆಲೂರವ್ವ ದೇವಿ ಗುಡಿಯ ಹತ್ತಿರ ನಡೆಯಲಿದೆ.
ಭಾನುವಾರ ಮಧ್ಯಾಹ್ನ 12 ಗಂಟೆಗೆ ಅತಿಥಿಗಳ ಸತ್ಕಾರ ಜಾತ್ರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಮಕನ ಮರಡಿ ಶಾಸಕ ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಉಮೇಶ ಕತ್ತಿ, ಸಂಸದ ರಮೇಶ ಕತ್ತಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ವಿಧಿ ಪೂರ್ವಕ ಅಲಂಕರಿಸಿದ ಲಕ್ಷ್ಮೀದೇವಿ ಕುಳಿತ ರಥೋತ್ಸವ ಗ್ರಾಮ ದೇವತೆ ಆಲೂರವ್ವನ ಗುಡಿಯಿಂದ ಪಾಶ್ಚಾಪೂರ ಬಸ್ ನಿಲ್ದಾಣದವರೆಗೆ ಜರುಗುವುದು.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಶೃಂಗರಿಸಿದ ಮಹಾಲಕ್ಷ್ಮೀ ದೇವಿಯ ರಥವನ್ನು ಬಸ್ ನಿಲ್ದಾಣದಿಂದ ಮರಳಿ ಆಲೂರವ್ವ ದೇವಿ ಗುಡಿಯವರೆಗೆ ತರಲಾಗುವುದು.
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮಹಾಲಕ್ಷ್ಮೀ ದೇವಿಯ ಶ್ರೀಫಲಗಳ ಲಿಲಾವು ನಡೆಯಲಿದೆ. ರಾತ್ರಿ 10 ಗಂಟೆಯ ನಂತರ ದೇವಿಯನ್ನು ಸೀಮೆಗೆ ಸಾಗಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಜಾತ್ರೆಯ ಪ್ರಯುಕ್ತ ಪ್ರಸಿದ್ಧ ಪೈಲ್ವಾನರಿಂದ ಜಂಗಿ ಕುಸ್ತಿ ಜರುಗಲಿವೆ. ಘಟಪ್ರಭಾ ಪ್ರಭಾ ಶುಗರ್ಸ್ ಅಧ್ಯಕ್ಷ ಲಖನ ಜಾರಕಿಹೊಳಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.