ಚಿಕ್ಕೋಡಿ: ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲ್ಲೂಕಿನ ಜೀವನದಿ ಕೃಷ್ಣೆಯ ಒಡಲು ಬರಿದಾಗುತ್ತಿದ್ದು, ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಮೂಡಿದೆ. ಈಗಿರುವ ನೀರಿನಲ್ಲಿ ನೀರ್ಬಳ್ಳಿ ಹಬ್ಬಿಕೊಂಡಿದ್ದು, ಜೀವಜಲ ಕಲುಷಿತವಾಗುತ್ತಿದೆ. ಇಷ್ಟಾದರೂ ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ’ ಎಂದು ಈ ಭಾಗದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
25 ದಿನಗಳ ಹಿಂದೆ ಮಹಾರಾಷ್ಟ್ರದ ಇಚಲಕರಂಜಿ ಪಟ್ಟಣದ ಹತ್ತಿರ ಇರುವ ಪಂಚಗಂಗಾ ನದಿಯಿಂದ ನರಸಿಂಹವಾಡಿ ಮೂಲಕ ಕೃಷ್ಣಾ ನದಿಯಲ್ಲಿ ನೀರ್ಬಳ್ಳಿ ಆವರಿಸಿತ್ತು. ಇದೀಗ ರಾಜಾಪುರ ಬ್ಯಾರೇಜ್ ಮೂಲಕ ರಾಜ್ಯ ವ್ಯಾಪ್ತಿಯ ನದಿ ಪಾತ್ರದಲ್ಲೂ ಆವರಿಸಿರುವ ನಿರ್ಬಳ್ಳಿ ಜನರಲ್ಲಿ ಆತಂಕ ಉಂಟು ಮಾಡಿದೆ. ನೀರ್ಬಳ್ಳಿಯಿಂದ ಜೀವಜಲ ಕಲುಷಿತವಾಗುತ್ತದೆ. ಚಿಕ್ಕೋಡಿ ಪಟ್ಟಣದ ಸೇರಿ ನದಿ ಪಾತ್ರದ 15 ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಹೀಗಾಗಿ, ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಏನಾದರೂ ಅವಘಡ ಘಟಿಸುವ ಮೊದಲೇ ನದಿಯಿಂದ ನಿರ್ಬಳ್ಳಿಯನ್ನು ನಿರ್ಮೂಲಿಸುವಂತೆ ಸಂಬಂಧಿತ ಅಧಿಕಾರಿಗಳನ್ನು ಮಾಂಜರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನೀತಾ ಭೋಜಕರ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.