ಬೆಳಗಾವಿ: ಇಲ್ಲಿನ ಹಿಂಡಲಗಾದ ಕಲ್ಮೇಶ್ವರ ಮಂದಿರದ ಬಳಿ ರಸ್ತೆಯ ಪಕ್ಕದ ಭೂಮಿಯಲ್ಲಿ ಜೈನ ತೀರ್ಥಂಕರರಾದ ಪಾರ್ಶ್ವನಾಥರ ಕಲ್ಲಿನ ಮೂರ್ತಿಯು ಭಾನುವಾರ ಪತ್ತೆಯಾಗಿದೆ.
ಹಿಂಡಲಗಾದಲ್ಲಿ ರಿಲಯನ್ಸ್ ಕಂಪೆನಿಯವರು ಭೂಮಿಯೊಳಗೆ ಕೇಬಲ್ ಅಳವಡಿಸುವ ಸಲುವಾಗಿ ಕಲ್ಮೇಶ್ವರ ಮಂದಿರದ ಬಳಿ ರಸ್ತೆಯ ಪಕ್ಕದಲ್ಲಿ ಅಗೆಯುತ್ತಿದ್ದ ಸಂದರ್ಭದಲ್ಲಿ ಈ ಪ್ರಾಚೀನ ಮೂರ್ತಿ ಪತ್ತೆಯಾಗಿದೆ. ಮೂರ್ತಿಯು ಸುಮಾರು 2.5 ಅಡಿ ಎತ್ತರ ಹಾಗೂ 1.5 ಅಡಿ ಅಗಲವಿದೆ.
ಮೂರ್ತಿಯಲ್ಲಿ ಪಾರ್ಶ್ವನಾಥರು ನಿಂತಿ ದ್ದಾರೆ. ಹಿಂದುಗಡೆ ಹಾವು ಹೆಡೆಬಿಚ್ಚಿಕೊಂಡು ನಿಂತಿರುವ ದೃಶ್ಯವಿದೆ. ಪಾರ್ಶ್ವನಾಥರ ಎಡ ಹಾಗೂ ಬಲ ಗಡೆಯ ಕೆಳ ಭಾಗದಲ್ಲಿ ಯಕ್ಷ,, ಯಕ್ಷಿಣಿ ಕುಳಿತಿರುವ ಚಿತ್ರ ಇದೆ. ಕೆಳ ತುದಿಯಲ್ಲಿ ಎನ್ನನ್ನೋ ಬರೆಯಲಾಗಿದ್ದು, ಅದು ಅಸ್ಪಷ್ಟವಾಗಿದೆ.
‘ಜೈನ ತೀರ್ಥಂಕರರ ಮೂರ್ತಿ ಪತ್ತೆಯಾಗಿರುವ ಕುರಿತು ಪುರಾತತ್ವ ಇಲಾಖೆಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಈ ಮೂರ್ತಿಯು ಯಾವ ಕಾಲಘಟ್ಟದ್ದು ಹಾಗೂ ಯಾವ ತೀರ್ಥಂಕರರ ಚಿತ್ರ ಇದೆ ಎಂಬುದನ್ನು ಅವರು ಪರಿಶೀಲಿಸ ಲಿದ್ದಾರೆ. ಮೂರ್ತಿಯನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು. ಸದ್ಯ ಮೂರ್ತಿಯ ಸಂರಕ್ಷಣೆಗಾಗಿ ಗ್ರಾಮೀಣ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ’ ಎಂದು ಬೆಳಗಾವಿಯ ತಹಶೀಲ್ದಾರ್ ಪ್ರೀತಂ ನಸಲಾಪುರೆ ‘ಪ್ರಜಾವಾಣಿ’ಗೆ ತಿಳಿಸಿದರು.
ಮನವಿ: ‘ಹಿಂಡಲಗಾದಲ್ಲಿ ಪತ್ತೆಯಾಗಿರುವ ಪಾರ್ಶ್ವನಾಥ ಜೈನ ತೀರ್ಥಂಕರರ ಮೂರ್ತಿಯನ್ನು ಜೈನ ಸಮಾಜಕ್ಕೆ ಒಪ್ಪಿಸ ಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರಿಗೆ ಇದೇ 16ರಂದು ಸಂಜೆ 4 ಗಂಟೆಗೆ ಮನವಿ ಸಲ್ಲಿಸಲಾಗುವುದು. ಹೀಗಾಗಿ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಸಮಾಜದವರು ಹಾಜರಿರಬೇಕು’ ಎಂದು ಭರತೇಶ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.