ADVERTISEMENT

ಟೇಲರ್ ಭವನಕ್ಕೆ 5 ಲಕ್ಷ ನೆರವು: ಪಟ್ಟಣ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 8:15 IST
Last Updated 27 ಸೆಪ್ಟೆಂಬರ್ 2011, 8:15 IST

ರಾಮದುರ್ಗ: ಟೇಲರ್ಸ್‌ ಅಸೋಸಿಯೇಷನ್ ಭವನದ ಕಟ್ಟಡ ನಿರ್ಮಾಣಕ್ಕೆ ಶಾಸಕ ನಿಧಿಯಿಂದ ರೂ 5 ಲಕ್ಷ ಅನುದಾನ ನೀಡುವುದಾಗಿ ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.

ಸ್ಥಳೀಯ ಮರಾಠಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಟೇಲರ್ಸ್‌ ಅಸೋಸಿಯೇಷನ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಗರ ಪ್ರದೇಶದಲ್ಲಿ ಟೈಲರ್ಸ್‌ ಅಸೋಸಿಯೇಷನ್‌ಗೆ ಸೂಕ್ತ ಜಾಗೆ ನೀಡಲು ಪುರಸಭೆಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದರು.

ಟೇಲರ್‌ಗಳ ವೃತ್ತಿ ಸೇವೆ ಸಮಾಜದ ಗೌರವ ಕಾಪಾಡುತ್ತದೆ. ಸಂಘಟನೆ ಮೂಲಕ ಒಗ್ಗಟ್ಟು ಪ್ರದರ್ಶಿಸಿ, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು ಎಲ್ಲರಿಗೂ ತಲುಪಲು ಆದ್ಯತೆ ನೀಡಬೇಕು. ಸಂಘಟಿತ ಹೋರಾಟ, ಪರಿಶ್ರಮದ ಕೆಲಸದಿಂದ ಮಾತ್ರ ನಿರ್ಲಕ್ಷ್ಯಿತ ಮತ್ತು ಸಣ್ಣ ಸಮಾಜದ ಸಮಸ್ಯೆಗೆ ಪರಿಹಾರ ಕಂಡುಳ್ಳಲು ಸಾಧ್ಯ ಎಂದು ನುಡಿದರು.

ಬಡ ಟೇಲರ್‌ಗಳಿಗೆ ಆರ್ಥಿಕ ನೆರವು ನೀಡಿ, ಸಾಮಾಜಿಕ ಭದ್ರತೆ ಒದಗಿಸುವ ಮಹತ್ವದ ಉದ್ದೇಶದತ್ತ ಸಂಘ ಗಮನಿಸಬೇಕು. ಅದಕ್ಕೆ ಪೂರಕವಾಗಿ ಅಗತ್ಯವಿರುವ ನಿವೇಶನ ಮತ್ತು ಯಂತ್ರಗಳನ್ನು ಪೂರೈಸಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಮಾರಂಭವನ್ನು ಉದ್ಘಾಟಿಸಿದರು. ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಮದುರ್ಗ ಟೇಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ವಿಠ್ಠಲ ಮಾಳದಕರ ಅಧ್ಯಕ್ಷತೆ ವಹಿಸಿದ್ದರು.

ದೇವೇಂದ್ರ ದಾಮೋದರ, ಸತೀಶ ಬ್ರಾಡ್‌ವೇ, ಗಂಗಾಧರ ಬೊಂಗಾಳೆ, ಸಾಧನಾ ಫೋಟೆ, ಪಿ. ಎಂ. ಜಗತಾಪ, ವಾಸುದೇವ ಹಂಚಾಟೆ, ಶಂಕರ ಲಮಾಣಿ, ಚಂದ್ರಕಾಂತ ಮಾಳದಕರ, ಅಂಬುಬಾಯಿ ನೊನಗಜ, ಗಂಗಾಧರ ವಾಸ್ಟರ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಂಕಿತಾ ಹಲ್ಯಾಳ ಸ್ವಾಗತಿಸಿದರು. ಪ್ರೇಮಾ ತೋಡಕರ ಕಾರ್ಯಕ್ರಮ ನಿರೂಪಿಸಿದರು. ರೇಖಾ ಚವಲಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.