ADVERTISEMENT

ದುಶ್ಚಟಗಳಿಂದ ದೂರವಿರಲು ಯುವಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 9:50 IST
Last Updated 14 ಫೆಬ್ರುವರಿ 2012, 9:50 IST

ಖಾನಾಪುರ: ಯುವಕರು ದುಶ್ಚಟಗಳ ದುಷ್ಪರಿಣಾಮವನ್ನು ಅರಿತು ಅವುಗಳಿಂದ ಮುಕ್ತಿ ಹೊಂದಬೇಕು ಹಾಗೂ ಮುಂದಿನ ದಿನಗಳಲ್ಲಿ ದುಶ್ಚಟಗಳಿಂದ ದೂರವಿರಬೇಕು ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ಇಟಗಿ ಗ್ರಾಮದ ಚನ್ನಮ್ಮೋ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೆಎಲ್‌ಇ. ವಿಶ್ವವಿದ್ಯಾಲಯದ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಫಾರ್ಮಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.

ವೈದ್ಯಕೀಯ ಶಿಬಿರಾರ್ಥಿಗಳು ಈ ಶಿಬಿರದಲ್ಲಿ ಗ್ರಾಮಸ್ಥರ ಜೊತೆ ಬೆರೆತು ಮೂಢನಂಬಿಕೆ, ಪರಿಸರ ನಾಶ, ಬಾಲ್ಯವಿವಾಹ, ಸ್ವಚ್ಛತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಬೇಕು ಎಂದರು.

ನಿವೃತ್ತ ಪ್ರಾಚಾರ್ಯ ವಿ.ವಿ.ಬಡಿಗೇರ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,  `ಇಂದಿನ ಕೆಲ ವೈದ್ಯರು ಹಣದ ಬೆನ್ನು ಹತ್ತಿದ್ದಾರೆ. ನೀವು ಮುಂಬರುವ ವೈದ್ಯಕೀಯ ಸೇವಾ ಅವಧಿಯಲ್ಲಿ ಹಾಗೆ ಮಾಡದೆ, ರೋಗಿಗಳನ್ನು ಮಗುವಿನಂತೆ ಆರೈಕೆ ಮಾಡಿ.
 
ನಿಮ್ಮ ಶ್ರಮಕ್ಕೆ ಗೌರವ ಮತ್ತು ಹಣ ತಂತಾನೇ ಲಭಿಸುತ್ತದೆ~ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹಾಂತೇಶ ರಾಮಣ್ಣವರ ಮಾತನಾಡಿ, 7 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ರಕ್ತದಾನ, ನೇತ್ರದಾನ ಇನ್ನಿತರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಜಿ ಮಂಡಲ ಪ್ರಧಾನ ಬಿ.ಎಂ.ಸಾಣಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಜನತಾ ಶಿಕ್ಷಣ ಪ್ರಸಾರ ಸಮಿತಿಯ ಕಾರ್ಯದರ್ಶಿ ಎಂ.ಎಸ್. ಸಾಣಿಕೊಪ್ಪ, ನಿರ್ದೇಶಕ ಬಸವಂತಪ್ಪ ಬೆಣಚಮರ್ಡಿ ಹಾಗೂ ಇತರರು ಉಪಸ್ಥಿತರಿದ್ದರು.

ಅನಿಲ ಪಾಟೀಲ ನಿರೂಪಿಸಿದರು. ಶೃತಿ ಮೇಟಿ ಸ್ವಾಗತಿಸಿದರು. ಜಯಶ್ರಿ ಹಿಟ್ನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.