ADVERTISEMENT

ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಬೇಕು

ಸಂಸದ ಸುರೇಶ ಅಂಗಡಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಮೇ 2018, 5:42 IST
Last Updated 11 ಮೇ 2018, 5:42 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಳಗಾವಿ: ‘ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಇಲ್ಲವೇ ಬಂಧಿಸಬೇಕು’ ಎಂದು ಸಂಸದ ಸುರೇಶ ಅಂಗಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ, ಕಾಂಗ್ರೆಸ್ಸಿನ ಫಿರೋಜ್‌ ಸೇಠ್‌ ಅವರು ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ದೇಶದ್ರೋಹಿ ಘೋಷಣೆ ಕೂಗಿರುವ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ  ಪ್ರಸಾರವಾಗಿವೆ. ಈ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು, ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕು ಹಾಗೂ ಅವರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗಡಿಭಾಗದಲ್ಲಿ ಸರ್ಜಿಕಲ್ ದಾಳಿ ಮೂಲಕ ದೇಶದ್ರೋಹಿಗಳನ್ನು ಸೆದೆಬಡಿಯುತ್ತಿದ್ದರೆ, ಇಲ್ಲಿ ಬೆಳಗಾವಿಯಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಲಾಗುತ್ತಿದೆ ಎಂದರು.

ADVERTISEMENT

ಮಹಾನಗರ ಪಾಲಿಕೆ ಆಡಳಿತದಲ್ಲಿ ಸೇಠ್ ಅವರು ಮೀತಿಮೀರಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ನೊಂದ ಮೇಯರ್ ಹಾಗೂ ಹಲವು ಜನ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಹಿರಿಯ ವಕೀಲ ಎಂ.ಬಿ.ಜಿರಲಿ ಮಾತನಾಡಿ, ದೇಶದ್ರೋಹಿ ಘೋಷಣೆ ಕೂಗಿರುವ ವಿಡಿಯೊ ತುಣಕುಗಳನ್ನು ನೋಡಿದ ದೇಶಭಕ್ತರು ಪೊಲೀಸರಿಗೆ ಠಾಣೆ ನೀಡಿದ್ದಾರೆ. ಫಿರೋಜ್‌ ಸೇಠ್‌ ಆರೋಪಿಸಿದಂತೆ ಇವರು ಬಿಜೆಪಿಯ ಕಾರ್ಯಕರ್ತರಲ್ಲ ಎಂದು ಹೇಳಿದರು.

ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ, ಮುರಗೇಶ ಪಾಟೀಲ, ಕಿರಣ ಜಾಧವ, ಶ್ರೀನಿವಾಸ ಬೀಸನಕೊಪ್ಪ ಹಾಗೂ ರಾಜು ಚಿಕ್ಕನಗೌಡರ ಇದ್ದರು.

**
ಶಾಸಕ ಫಿರೋಜ್ ಸೇಠ್ 10 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ? ಕೇವಲ ಅಕ್ರಮ ಕಸಾಯಿಖಾನೆಗಳಿಗೆ ರಕ್ಷಣೆ ಒದಗಿಸುವುದನ್ನೇ ಮಾಡಿದ್ದಾರೆ –
ಸುರೇಶ ಅಂಗಡಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.