ADVERTISEMENT

'ನನ್ನ ಬಸ್‌, ನನ್ನ ಬಸ್‌ ನಿಲ್ದಾಣ' ಯೋಜನೆಗೆ ಚಾಲನೆ

ಮಹಾತ್ಮಾ ಗಾಂಧೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 5:41 IST
Last Updated 3 ಅಕ್ಟೋಬರ್ 2017, 5:41 IST

ನಿಪ್ಪಾಣಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜನ್ಮದಿನೋತ್ಸವದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ‘ನನ್ನ ಬಸ್‌, ನನ್ನ ಬಸ್‌ ನಿಲ್ದಾಣ’ದ ಸ್ವಚ್ಛತೆ ಯೋಜನೆಯಡಿ ಸ್ಥಳೀಯ ಬಸ್‌ ನಿಲ್ದಾಣ ಪರಿಸರದಲ್ಲಿ ಸೋಮವಾರ ಸ್ವಚ್ಛತಾ ಅಭಿಯಾನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಸಕ್ರಿಯವಾಗಿ ಪಾಲ್ಗೊಂಡು ಪರಿಸರವನ್ನು ಶುಚಿತ್ವಗೊಳಿಸಿ ವೃಕ್ಷಾರೋಪಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ದೇಶದಲ್ಲಿ ಪ್ರಧಾನಿ ಮೋದಿಯವರು ಪ್ರಾರಂಭಿಸಿದ ಸ್ವಚ್ಛ ಭಾರತ ಅಭಿಯಾನದಿಂದ ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವಾಗುತ್ತದೆ.

ಮಹಾತ್ಮಾ ಗಾಂಧೀಜಿಯವರ ಜಯಂತಿ ನಿಮಿತ್ತ ಹಮ್ಮಿಕೊಂಡ ಇಂದಿನ ಕಾರ್ಯಕ್ರಮ ಅಂಗವಾಗಿ ಇಲ್ಲಿ ಆಗಮಿಸುವ ಪ್ರವಾಸಿಗರಿಗೆ ಸ್ವಚ್ಛತೆಯ ಮಹತ್ವವನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ನಿಲ್ದಾಣದ ಆವರಣದಲ್ಲಿ ಜನಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು.

ADVERTISEMENT

ಪ್ರತಿಯೊಬ್ಬರು ಮಹಾತ್ಮರ ಈ ಶುಭದಿನದಿಂದ ತಮ್ಮ ಪರಿಸರದ ಶುಚಿತ್ವತೆ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತ ದೇಶದ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದರು.

ಆರಂಭದಲ್ಲಿ ಅವರು ಬಸ್‌ ನಿಲ್ದಾಣದ ಪರಿಸರದಲ್ಲಿ ಸಸಿಗಳನ್ನು ನೆಟ್ಟು ನೀರುಣಿಸಿದರು. ಬಳಿಕ ಕೈಗೆ ಕೈಗವಸು ಹಾಕಿಕೊಂಡು ಪೊರಕೆ ಹಿಡಿದು ಇತರ ಗಣ್ಯರೊಂದಿಗೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಪರಿಸರವನ್ನು ಸ್ವಚ್ಛಗೊಳಿಸಿದರು.

ಬಿಜೆಪಿ ಸ್ಥಳೀಯ ನಗರ ಘಟಕದ ಅಧ್ಯಕ್ಷ ಜಯವಂತ ಭಾಟಲೆ, ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಸಮೀತ ಸಾಸನೆ, ಸ್ಥಳೀಯ ನಗರಸಭೆ ಸದಸ್ಯ ದೀಪಕ ಮಾನೆ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿಭಾವರಿ ಖಾಂಡಕೆ, ಪ್ರಣವ ಮಾನವಿ, ಅಶೋಕ ರಾವುತ, ರಮೇಶ ವೈದ್ಯ, ಡಾ. ವಿಲಾಸ ಶಿಂಧೆ, ಶೌಕತ್‌ ಜಮಾದಾರ, ವಿಶ್ವನಾಥ ಜಾಧವ, ಉಮೇಶ ಗಂಥಡೆ, ಆಕಾಶ ಮಾನೆ, ಪ್ರಕಾಶ ಕೋಪಾರ್ಡೆ, ಬಾಬುರಾವ್ ಮಹಾಜನ, ರವಿ ದಿವಟೆ, ಕಲ್ಪನಾ ಬೋಂಗಾಲೆ, ಸೋನಾಲಿ ಉಪಾಧ್ಯೆ, ಸಾರಿಗೆ ಇಲಾಖೆಯ ಸಂದೀಪ್‌ ಎಸ್‌., ಎಂ.ಬಿ. ಬಿರಾದಾರ, ಪಿ.ಜಿ. ಸಣದಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.